ಸಿದ್ದರಾಮಯ್ಯಗೆ ಅತೃಪ್ತ ಶಾಸಕರ ಕರೆ
Team Udayavani, Jul 28, 2019, 5:27 AM IST
ವಿಜಯಪುರ: ಮುಂಬೈನಲ್ಲಿರುವ ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೊಬೈಲ್ಗೆ ಕರೆ ಮಾಡಿ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಸಿದ್ದರಾಮ ಯ್ಯನವರು ಕರೆಗಳನ್ನು ಸ್ವೀಕರಿಸಿಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯ್ದೆಯ 10ನೇ ಶೆಡ್ಯೂಲ್ಗೆ ತಿದ್ದುಪಡಿ ತರುವುದು ಇಂದಿನ ಅಗತ್ಯವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಕಾಂಗ್ರೆಸ್ನ ಮೂವರು ಶಾಸಕರನ್ನು ಸ್ಪೀಕರ್ ಅನರ್ಹ ಮಾಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಸಾಧ್ಯತೆಯಿದೆ. ಅತೃಪ್ತ ಶಾಸಕರು ವಿಧಾನಸಭೆ ಅಧ್ಯಕ್ಷರೆದುರು ವಿಚಾರಣೆಗೆ ಹಾಜರಾಗುವ ವೇಳೆ ಝೀರೋ ಟ್ರಾಫಿಕ್ ಕಲ್ಪಿಸಿರಲಿಲ್ಲ. ಗೃಹ ಸಚಿವನಾಗಿ ನಾನೇ ಝೀರೋ ಟ್ರಾಫಿಕ್ ಬಳಸಿರಲಿಲ್ಲ. ಇನ್ನು ಅತೃಪ್ತರಿಗೆ ಹೇಗೆ ಅಂಥ ಸೌಲಭ್ಯ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಬಿಜೆಪಿಯಲ್ಲಿ ವೃದ್ಧರಿಗೆ ರಾಜಕೀಯ ಅಧಿಕಾರ ಇಲ್ಲ ಎಂಬ ನಿಯಮ ಮಾಡಿಕೊಂಡಿದ್ದು, ರಾಜಕೀಯ ಸಂಧ್ಯಾ ಕಾಲದಲ್ಲಿರುವ ಯಡಿಯೂರಪ್ಪ ಅವರು ಈಗ ಅಸಾಧ್ಯವಾದರೆ ಭವಿಷ್ಯದಲ್ಲಿ ಮತ್ತೆ ಇಂಥ ಅವಕಾಶ ಸಿಗಲ್ಲ ಎಂಬ ದುರಾಸೆಯಿಂದ ತರಾತುರಿಯಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ತಾಳ್ಮೆಯಿಂದ ಮುಂದೆ ಸಿಎಂ ಆಗುವ ವಿಶ್ವಾಸ ಅವರಲ್ಲಿಲ್ಲ. ಈಗ ಅಧಿಕಾರ ಕೈ ತಪ್ಪಿದರೆ ಭವಿಷ್ಯದಲ್ಲಿ ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದೆಂಬ ಆತಂಕ ಅವರಲ್ಲಿತ್ತು. ಹೀಗಾಗಿ, ತರಾತುರಿಯಲ್ಲಿ ಅನೈತಿಕ ಮಾರ್ಗದಲ್ಲಿ ಸರಕಾರ ರಚಿಸಲು ಮುಂದಾಗಿದ್ದಾರೆ ಎಂದು ಮೂದಲಿಸಿದರು.
ಯಡಿಯೂರಪ್ಪನವರು ಏನೆಲ್ಲ ತಂತ್ರಗಾರಿಕೆ ಮಾಡಿದರೂ ಅವರ ಸರಕಾರಕ್ಕೆ ಆರು ತಿಂಗಳಿಂದ ಒಂದು ವರ್ಷ ಮಾತ್ರ ಆಯುಷ್ಯ ಇದೆ ಎಂದು ಭವಿಷ್ಯ ನುಡಿದರು.