ಸರ್ಕಾರದ ಮಾರ್ಗದರ್ಶನದಂತೆ ಪಡಿತರ ವಿತರಿಸಿ
Team Udayavani, Apr 13, 2020, 3:52 PM IST
ಸಿಂದಗಿ: ತಾಲೂಕಿನ ಖೈನೂರ ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಗೆ ಸಹಾಯಕ ಕೃಷಿ ನಿರ್ದೇಶಕ, ತಾಲೂಕು ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಡಾ| ಎಚ್.ವೈ. ಸಿಂಗೆಗೋಳ ಭೇಟಿ ನೀಡಿದರು.
ಸಿಂದಗಿ: ಸರ್ಕಾರದ ಮಾರ್ಗದರ್ಶನದಂತೆ ಆಹಾರ ಧಾನ್ಯ ವಿತರಿಸಬೇಕು. ಫಲಾನುಭವಿಗಳು ಆಹಾರ ಧಾನ್ಯ ಪಡೆಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ರೋಗ ಹರಡದಂತೆ ಜಾಗೃತಿ ವಹಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ, ತಾಲೂಕು ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಡಾ| ಎಚ್.ವೈ. ಸಿಂಗೆಗೋಳ ಹೇಳಿದರು.
ತಾಲೂಕಿನ ಖೈನೂರ ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಕೊರೊನಾ ರೋಗ ಭೀತಿ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಎರಡು ತಿಂಗಳ ಆಹಾರಧಾನ್ಯದ ಗುಣಮಟ್ಟವನ್ನು ಪರಿಶೀಲಿಸಿ ಅವರು ಮಾತನಾಡಿದರು. ಕೊರೊನಾ ಹರಡುವಿಕೆಯ ಹಿನ್ನೆಲೆಯಲ್ಲಿ ಬಡ ಕುಟುಂಬ ಗಳಿಗೆ ತೊಂದರೆ ಯಾಗಬಾರದು ಎಂಬ ಉದ್ದೇಶದಿಂದ ಎರಡು ತಿಂಗಳ ಪಡಿತರ ಆಹಾರ ಧಾನ್ಯವನ್ನು ಇದೇ ತಿಂಗಳು ವಿತರಣೆ ಮಾಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಪಡಿತರ ಚೀಟಿದಾರರು ಬಯೊಮೆಟ್ರಿಕ್ನಲ್ಲಿ ಬೆರಳು ಮುದ್ರೆ ಒತ್ತುವ ಅಗತ್ಯವಿಲ್ಲ. ತಮ್ಮ ರೇಷನ್ ಕಾರ್ಡ್ ತೋರಿಸಿ ಪಡಿತರ ಪಡೆಯಬಹುದು. ರೇಷನ್ ಪಡೆದುಕೊಳ್ಳಲು ಬರುವಾಗ ಎಲ್ಲರೂ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬರಬೇಕು ಎಂದು ತಿಳಿಸಿದರು. ಗ್ರಾಮಗಳಲ್ಲಿ ನೈರ್ಮಲ್ಯಕ್ಕೆ ಒತ್ತು ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಗುಂಪು ಸೇರಬಾರದು. ಕೋವಿಡ್ 19 ಸೋಂಕು ತಡೆಗೆ ಜನರು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಪಡಿತರ ಫಲಾನುಭವಿಗಳಿಗೆ ತಿಳಿ ಹೇಳಿದರು.
ನ್ಯಾಯಬೆಲೆ ಅಂಗಡಿಗಳ ಮುಂದೆ ನೂಕುನುಗ್ಗಲು ಆಗದಿರಲಿ. ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಫಲಾನುಭವಿಗಳಿಗೆ ಧಾನ್ಯಗಳನ್ನು ವಿತರಣೆ ಮಾಡಬೇಕು. ಪ್ರತಿ ಕುಟುಂಭಕ್ಕೆ ಸದಸ್ಯರನು ಗುಣವಾಗಿ ನಿಗದಿ ಪಡೆಸಿದಂತೆ ಅವರಿಗೆ ಸರಿಯಾಗಿ ಪಡಿತರ ಧಾನ್ಯಗಳನ್ನು ವಿತರಣೆ ಮಾಡಬೇಕು ಎಂದು ನ್ಯಾಯ ಬೆಲೆ ಅಂಗಡಿಯ ಪರಮಾನಂದ ಬಿರಾದಾರ ಅವರಿಗೆ ಸೂಚನೆ ನೀಡಿದರು.