ತಾಳಿಕೋಟೆ ತಾಲೂಕು ಸಂಪೂರ್ಣ ಸ್ತಬ್ಧ
Team Udayavani, Jul 20, 2020, 12:33 PM IST
ತಾಳಿಕೋಟೆ: ರಾಜ್ಯ ಸರ್ಕಾರ ಕೋವಿಡ್ ತಡೆಗಟ್ಟುವ ಸಲುವಾಗಿ ಹೊಸದಾಗಿ ಜಾರಿ ಮಾಡಿರುವ ರವಿವಾರ ಲಾಕ್ಡೌನ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ತಾಳಿಕೋಟೆ ಪಟ್ಟಣ ಒಳಗೊಂಡು ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶದಿಂದಲೂ ಕೂಡಾ ಬೆಂಬಲ ವ್ಯಕ್ತವಾಗಿದೆ.
ನಸುಕಿನ ಜಾವ ಹಾಲು, ಪೇಪರ್ ಸೇರಿದಂತೆ ಅಗತ್ಯ ವಸ್ತು ಖರೀದಿಗೆ ಆಗಮಿಸಿದ್ದ ಸಾರ್ವಜನಿಕರು 7ರ ವೇಳೆ ಎಲ್ಲರೂ ಮನೆಯನ್ನು ಸೇರಿಕೊಂಡಿದ್ದರು. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ರಸ್ತೆಯಲ್ಲಿ ಯಾರೂ ತಿರುಗಾಡುವುದು ಕಾಣಲಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಸಹ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ನಿರ್ದೇಶನದಂತೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ್ದಲ್ಲದೇ ಖಾಸಗಿ ವಾಹನಗಳ ಮಾಲೀಕರು ಸಹ ತಮ್ಮ ವಾಹನಗಳ ಓಡಾಟ ಸ್ಥಗಿತಗೊಳಿಸಿದ್ದರು. ಜನರ ಅವಶ್ಯಕತೆ ತಕ್ಕಂತೆ ಒಂದೆರಡು ಆಟೋಗಳು ಸಂಚರಿಸಿದ್ದು ಬಿಟ್ಟರೆ ಬಹುತೇಕವಾಗಿ ಮುಖ್ಯ ರಸ್ತೆಗಳಲ್ಲದೇ ಬಡಾವಣೆಗಳಲ್ಲಿಯ ಚಿಕ್ಕ ಅಂಗಡಿ ಮುಂಗಟ್ಟುಗಳು ಸಹ ಮುಚ್ಚಿದ್ದವು. ಬೆಳಗ್ಗೆ ಸಮಯದಲ್ಲಿ ಕಾಯಪಲ್ಲೆಯನ್ನು ಹೊರತುಪಡಿಸಿ ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು.
ಸರ್ಕಾರದ ಮಾರ್ಗಸೂಚಿಯಂತೆ ಪಟ್ಟಣದಲ್ಲಿ ದಿನಬಳಕೆ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿತ್ತು. ಅನವಶ್ಯಕವಾಗಿ ಸುತ್ತಾಡುವವವರಿಗೆ ಎಚ್ಚರಿಕೆ ನೀಡಲಾಗಿದೆ. ಲಾಕ್ಡೌನ್ ನಂತರದ ದಿನಗಳಲ್ಲಿ ಮನೆಯಿಂದ ಆಚೆ ಬರುವಾಗ ಪ್ರತಿಯೊಬ್ಬರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಹೊರಗಡೆ ಬರಬೇಕು. ಎಸ್.ಎಚ್.ಪವಾರ ಪಿಎಸೈ, ತಾಳಿಕೋಟೆ