ಹಗಲಲ್ಲಿ ವಿದ್ಯುತ್ ಪೂರೈಸಿ
Team Udayavani, Jan 20, 2022, 6:03 PM IST
ದೇವರಹಿಪ್ಪರಗಿ: 110 ಕೆವಿ ವಿದ್ಯುತ್ ಉಪ ಕೇಂದ್ರದ ಅಡಿಯಲ್ಲಿ ಬರುವ ಇಐಪಿ ಮಾರ್ಗದಲ್ಲಿ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಎಇಇ ಜಿ.ಎಸ್. ಅವಟಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ವೇಳೆ ರೈತ ಪ್ರತಿನಿಧಿ ಅಜೀಜ್ ಯಲಗಾರ ಮಾತನಾಡಿ, ಜ. 16ರಿಂದ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವಿದ್ಯುತ್ ನೀಡಲು ಆರಂಭಿಸಿದ್ದು ರೈತರಿಗೆ ಸಮಸ್ಯೆಯನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಈಗ ಕೊರೆಯುವ ಛಳಿ ಹೆಚ್ಚಾಗುತ್ತಿದ್ದು ಈ ಸಮಯದಲ್ಲಿ ರೈತರು ಅದರಲ್ಲೂ ವೃದ್ಧರು ನೀರಲ್ಲಿ ನಿಂತು ನೀರುಣಿಸುವುದು ಒಳ್ಳೆಯದಲ್ಲ. ಅದರಲ್ಲೂ ಕೋವಿಡ್ ಮೂರನೇ ಅಲೆಯಲ್ಲಿ ನೆಗಡಿ, ಕೆಮ್ಮು, ಜ್ವರ ಎಲ್ಲರಿಗೂ ಸಾಮಾನ್ಯವಾಗಿದ್ದು ರೈತರು ಇವುಗಳಿಂದ ಹೊರತಾಗಿಲ್ಲ. ಆದ್ದರಿಂದ ಹೆಸ್ಕಾಂ ಅಧಿಕಾರಿಗಳು ಪುನಃ ಮೊದಲಿನಂತೆ ಹಗಲು ಸಮಯದಲ್ಲಿ ಏಳು ಗಂಟೆ ನೀಡುವುದರ ಮೂಲಕ ರೈತ ಸಮುದಾಯಕ್ಕೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಯಲ್ಲಾಲಿಂಗ ನಾಲತವಾಡ, ಉಸ್ಮಾನಸಾಬ್ ಹಚ್ಯಾಳ, ಗುರುರಾಜ ಅವಟಿ, ಚಂದ್ರಕಾಂತ ಡಾಲೇರ, ಕುಮಾರ ದೇವಣಗಾಂವ, ಶರಣಪ್ಪ ಡಾಲೇರ, ದಶರಥ ಹಳ್ಳಿ, ಪರಸಪ್ಪ ಡಾಲೇರ ಸೇರಿದಂತೆ ಇತರರು ಇದ್ದರು.