ಕಾಂಗ್ರೆಸ್ ಪಕ್ಷಕ್ಕಿದೆ ಭವ್ಯ ಇತಿಹಾಸ
Team Udayavani, May 7, 2018, 12:03 PM IST
ಇಂಡಿ: ಭಾರತದ ಏಕತೆ, ಸಮಗ್ರತೆ, ಅಭಿವೃದ್ಧಿಗೆ ಶ್ರಮಿಸಿದ್ದು ಅಲ್ಲದೇ ದೇಶಕ್ಕೆ ತ್ಯಾಗ, ಬಲಿದಾನಗಳ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಪಡನೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಅವರು ದೇಶವನ್ನು ಮುನ್ನಡೆಸುವತ್ತ ಪ್ರಯತ್ನ ಪಟ್ಟಿದ್ದಾರೆ. ಕಾಂಗ್ರೆಸ್ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಬದ್ಧತೆಯಿಂದ ನಡೆದುಕೊಂಡಿದೆ. ಅದರಂತೆ ಇಂಡಿ ತಾಲೂಕಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಪದಾಧಿ ಕಾರಿಗಳನ್ನಾಗಿ ನೇಮಿಸಿ ಅಣ್ಣ ಬಸವಣ್ಣನ ನಾಡಿನಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಡಿಯಲ್ಲಿ ನ್ಯಾಯ ಒದಗಿಸಲಾಗಿದೆ. ತಾಲೂಕಿನ ಸಹಕಾರಿ ರಂಗ, ಸಾಮಾಜಿಕ ರಂಗ, ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಸ ಶಕೆಯನ್ನು ಬರೆದು ಮನ್ವಂತರ ಸಾರಲಾಗಿದೆ.
ತಾಲೂಕಿನ ರೈತರ ಹಿತಕ್ಕಾಗಿ 17 ಕೆರೆಗಳಲ್ಲಿ 13 ಕೆರೆ ತುಂಬಿಸಲಾಗಿದೆ. ಉಳಿದ ಕೆರೆಗಳನ್ನು ತಾಂತ್ರಿಕ ಕಾರಣದಿಂದ ತುಂಬಿಸಲಾಗಿಲ್ಲ. ಪಟ್ಟಣದ ಸೌಂದರ್ಯಿಕರಣ ರಸ್ತೆ ಕಾಮಗಾರಿ, ಒಳಚರಂಡಿ ಕಾಮಗಾರಿಗಳನ್ನು ಮಾಡಲಾಗಿದೆ. ಇಂಡಿ ನಗರಕ್ಕೆ 90 ಲಕ್ಷ ವೆಚ್ಚದಲ್ಲಿ ದೂಳಖೇಡ, ಟಾಕಳಿ ಹತ್ತಿರ ಜಾಕ್ ವೆಲ್ ನಿರ್ಮಿಸಿ 24×7 ಕುಡಿಯುವ ನೀರು ಪೂರೈಕೆಗೆ ಯೋಜನೆ ಕಾರ್ಯಗತಗೊಳ್ಳಲಿದೆ ಎಂದರು.
ತಾಲೂಕಿನ ಎಲ್ಲ ಗ್ರಾಮಗಳಿಗೆ ಸಮರ್ಪಕ ರಸ್ತೆಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ವಿವಿಧ ಸಮಾಜ ಮಂದಿರಗಳು, ಭವನಗಳನ್ನು ನಿರ್ಮಿಸಲಾಗಿದೆ. 2013ರ ಚುನಾವಣೆಯಲ್ಲಿ ತಾಲೂಕಿನ ಜನತೆ ಅತಿ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ. ಅದಕ್ಕೆ ತಕ್ಕುದಾಗಿ ನಾನು ನಿಮ್ಮೇಲ್ಲರ ಅಳಿಲು ಸೇವೆ ಮಾಡಿದ್ದೇನೆ. ನನ್ನ ಕಾರ್ಯ ನನಗೆ ತೃಪ್ತಿ ತಂದಿದೆ. ಮತದಾರ ಪ್ರಭುಗಳು ನನಗೆ ಮೇ 12ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಮತ ನೀಡಿ ಆಶೀರ್ವಧಿಸಲು ಕೋರಿದರು.