ತಾಯಿ ಪ್ರತಿ ಮಗುವಿನ ಆತ್ಮವಿಶ್ವಾಸದ ಪ್ರತೀಕ: ಅಶೋಕ ಹಂಚಲಿ
ಶಿಸ್ತು, ಸಂಯಮದ ಜೊತೆಗೆ ಸೋಲು, ಟೀಕೆಗಳನ್ನು ಸಹಿಸುವುದನ್ನೂ ಕಲಿಸಿಕೊಡಬೇಕು.
Team Udayavani, Jan 19, 2021, 6:38 PM IST
ವಿಜಯಪುರ: ತಾಯಿ ಎಂದರೆ ಒಂದು ಬೆಂಬಲವಿದ್ದಂತೆ, ಅದು ಜಗತ್ತಿನಲ್ಲಿನ ಅತೀ ಸದೃಢ ಬೆಂಬಲ. ನಮ್ಮೊಂದಿಗೆ ಯಾರೇ ಇರಲಿ, ಇಲ್ಲದಿರಲಿ, ತಾಯಿ ಮಮತೆಯೊಂದೇ ಆತ್ಮವಿಶ್ವಾಸದ ಪ್ರತೀಕವಾಗಿದ್ದು, ನಮಗೆಲ್ಲ ಬದುಕುವ ಚೈತನ್ಯ ತಂದುಕೊಡುತ್ತದೆ. ಜೀವನದಲ್ಲಿನ ಸೋಲು ಗೆಲುವನ್ನು ಸಮಾನವಾಗಿ ಕಾಣಲು ಈ ಆತ್ಮವಿಶ್ವಾಸವು ಸಹಕಾರಿಯಾಗಿರುತ್ತದೆ ಎಂದು ತಾಳಿಕೋಟೆಯ ಶಿಕ್ಷಕ ಅಶೋಕ ಹಂಚಲಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ತಾಯಿ ಮಹತ್ವ ಕುರಿತಾಗಿ ಅವರು ಉಪನ್ಯಾಸ ನೀಡಿದರು.
ತಾಯಿ ಮಕ್ಕಳಿಗೆ ಬಾಲ್ಯದಲ್ಲೇ ಶಿಸ್ತು, ಸಂಯಮದ ಜೊತೆಗೆ ಸೋಲು, ಟೀಕೆಗಳನ್ನು ಸಹಿಸುವುದನ್ನೂ ಕಲಿಸಿಕೊಡಬೇಕು. ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ, ಕುಟುಂಬ ಖುಷಿಯಾಗಿದ್ದರೆ ಆ ಮನೆತನ ಖುಷಿಯಾಗಿರುತ್ತದೆ, ಅದರಂತೆ ದೇಶ ಖುಷಿಯಾಗಿರುತ್ತದೆ. ಇಡಿ ದೇಶದ ಖುಷಿ
ತಾಯಿ ಮೇಲೆ ನಿಂತಿದೆ. ಇದಕ್ಕಾಗಿಯೇ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಮಾತಲ್ಲಿ ತಾಯಿಗಿಂತ ದೊಡ್ಡದು ಇನ್ನೇನು ಇಲ್ಲವೇ ಇಲ್ಲ ಎಂದು ಹೇಳಿರುವುದು ಎಂದು ವಿಶ್ಲೇಷಿಸಿದರು.
ತಾಯಿ ಕೈಗಳು ನಮ್ಮ ತಲೆಯನ್ನು ನೇವರಿಸಲು, ರಮಿಸಲು ನಾವು ಪುನಃ ಶ್ಚೇತನಗೊಳ್ಳಲು ಆರಂಭಿಸುತ್ತೇವೆ. ಯಾವುದೇ ಸವಾಲಿಗೂ ಮೈಯೊಡ್ಡಲು ಸಿದ್ಧರಾಗಿ ನಿಲ್ಲುತ್ತೇವೆ. ಅದುವೇ ತಾಯಿ ಎಂಬ ಪ್ರೀತಿ ಮತ್ತು ಬೆಂಬಲ. ಕವಿ ಜಿ.ಎಸ್. ಶಿವರುದ್ರಪ್ಪ ಹೇಳುವಂತೆ ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ, ಎಂದು ತಾಯಿಯನ್ನು ವರ್ಣಿಸಿದ್ದಾರೆ.
ತಂದೆ, ತಾಯಿ ದೈನಂದಿನ ಬದುಕಿನಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಅನ್ನುವುದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಹೀಗಾಗಿ ತಂದೆ ತಾಯಿಗಳು, ತಮ್ಮ ಮಕ್ಕಳಿಗೆ ತಾವೇ ಸಮಾಜದ ಮೊದಲ ಮಾದರಿ ಎಂಬಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಯಿ ಭೂಮಿಗಿಂತ ಮಿಗಿಲು, ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಜೀವ ಮತ್ತೂಂದಿಲ್ಲ. ತಾಯಿಯ ಆ ಶ್ರಮ, ದುಡಿಮೆ, ಮಮತ್ತೆ, ಕಾಳಜಿ ಎಲ್ಲವನ್ನೂ ಪ್ರೀತಿಯಿಂದ ನಿಭಾಯಿಸಿಕೊಂಡು ಹೋಗುವ ಅಮ್ಮನ ಗುಣ, ಈ ಜಗತ್ತಿಗೆ ಒಂದು ಮಾದರಿಯ ಪಾಠ. ಎಷ್ಟೇ ಕೆಲಸದ ಒತ್ತಡವಿದ್ದರೂ ಬೇಸರಿಸಿಕೊಳ್ಳದ ಏಕೈಕ ಜೀವ ಎಂದರೆ ತಾಯಿ ಮಾತ್ರ. ಆಯಾಸವಿಲ್ಲದೇ ಎಲ್ಲವನ್ನೂ
ಅಚ್ಚುಕಟ್ಟಾಗಿ ನಿಭಾಯಿಸುವ ಕಲೆ ತಾಯಿಗೆ ಮಾತ್ರ ಗೊತ್ತು ಎಂದು ಬಣ್ಣಿಸಿದರು.
ಶಿಕ್ಷಕಿ ಎಲ್.ಎಲ್. ತೊರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿರಿಗನ್ನಡ ವೇದಿಕೆ ಅಧ್ಯಕ್ಷ ಎನ್.ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಧನಶೆಟ್ಟಿ, ಬಸವರಾಜ ಕುಂಬಾರ, ರಾಜಶೇಖರ ಉಮರಾಣಿ, ಮಹಾದೇವಿ ತೆಲಗಿ, ಶರಣಗೌಡ ಪಾಟೀಲ, ಸೋಮಶೇಖರ ಕುರ್ಲೆ, ಶಿವಲಿಂಗ ಕಿಣಗಿ, ರವಿ ಕಿತ್ತೂರ, ಸದಾಶಿವ ಪೂಜಾರಿ, ಮಹಾದೇವ ರಬಿನಾಳ, ಸುಮಂಗಲ ಪೂಜಾರಿ, ಭರತೇಶ ಕಲಗೊಂಡ, ಬಸವರಾಜ ಹಂಚಲಿ, ಎಸ್.ವೈ. ನಡುವಿನಕೆರಿ, ಸಿದ್ದನಗೌಡ
ಕಾಸಿನಕುಂಟೆ, ಛಾಯಾ ಮಸಿಯವರ, ಭೌರಮ್ಮ ಮುಗಳೊಳ್ಳಿ, ಡಾ| ಶ್ಯಾಮಶ್ಯಾಅಲಿ ಮುಲ್ಲಾ, ಮುಸ್ತಾಕ್ ಮಲಗಾಣ, ರೇಣುಕಾ ಕಲಬುರ್ಗಿ,
ಎಂ.ಐ. ಬೇಪಾರಿ, ಶಾಂತಾ ವಿಭೂತಿಮಠ, ಸುನಂದಾ ಕೋರಿ ಇದ್ದರು.