ನಾಲತವಾಡ ಸಿಂಡಿಕೇಟ್ ಬ್ಯಾಂಕಿಗೆ ಕನ್ನ ಹಾಕಿದ ಕಳ್ಳರು
Team Udayavani, Nov 18, 2019, 3:46 PM IST
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿನ ಸಿಂಡಿಕೇಟ್ ಬ್ಯಾಂಕಿಗೆ ಕನ್ನಹಾಕಿ ಕಳ್ಳತನ ಮಾಡಿರುವ ಘಟನೆ ಜರುಗಿದೆ.
ನಾಲತವಾಡದ ಸಿಂಡಿಕೇಟ್ ಬ್ಯಾಂಕಿಗೆ ಕಳ್ಳರು ಕನ್ನ ಹಾಕಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಶನಿವಾರ ಮಧ್ಯಾಹ್ನದ ನಂತರ ಮತ್ತು ರವಿವಾರ ರಜೆ ಇದ್ದ ಕಾರಣ ಕಳ್ಳರು ಬ್ಯಾಂಕಿನ ಹಿಂಬದಿಯಿಂದ ಲಾಕರ್ ರೂಮಿನ ಗೋಡೆಗೆ ಕನ್ನ ಕೊರೆದಿದ್ದಾರೆ. ಸೋಮವಾರ ಬೆಳಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾದಾಗ ಲಾಕರ್ ಕೊಠಡಿಗೆ ಕನ್ನ ಹಾಕಿದ್ದು ಕಂಡಿದೆ. ಕೂಡಲೆ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಸಿ.ಪಿ.ಐ ಆನಂದ ವಾಗ್ಮೋರೆ ಕೂಡಲೆ ಘಟನಾ ಸ್ಥಳಕ್ಕೆ ಬೇಡಿ ನೀಡಿ ಪರಿಶೀಲಿಸಿದ್ದಾರೆ.
ಲಾಕರ್ ರೂಮಿನಲ್ಲಿದ್ದ ದಾಖಲೆಗಳನ್ನು ಎಲ್ಲೆಂದರಲ್ಲಿ ಎಸೆದಾಡಿರುವ ಕಳ್ಳರು, ಲಾಕರ್ ತೆಗೆಯಲು ಮಾಡಿದ ಯತ್ನ ವಿಫಲವಾಗಿದೆ. ಲಾಕರ್ ಜೊತೆಗಿದ್ದ 13,460 ಚಿಲ್ಲರೆ ಹಣವನ್ನು ಲೂಟಿ ಮಾಡಿದ್ದಾರೆ.
ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕರು ಶಿವಶಂಕರ ತಾಳಿಕೂಟಿ ಮುದ್ದೇಬಿಹಾಳ ಪೂಲಿಸ್ ಠಾಣೆಗೆ ದೂರು ದಾಖಲಿಸಿದ್ದಾರೆ.