ಭೀಮಾ ನದಿಗೆ ಉರುಳಿದ ಕಬ್ಬು ತುಂಬಿದ ಟ್ರ್ಯಾಕ್ಟರ್: ಚಾಲಕ ಪಾರು
Team Udayavani, Nov 23, 2020, 12:33 PM IST
ವಿಜಯಪುರ: ಜಿಲ್ಲೆಯ ಭೀಮಾ ನದಿಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದಿದ್ದು, ಚಾಲಕ ಸೇರಿ ಟ್ರ್ಯಾಕ್ಟರ್ ನಲ್ಲಿ ಇದ್ದ ಹಲವರು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ.
ಚಡಚಣ ತಾಲೂಕ ಉಮರಾಣಿ ಗ್ರಾಮದಿಂದ ಲವಗಿ ಮಾರ್ಗವಾಗಿ ರೈತರು ಸಕ್ಕರೆ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಮೂಲಕ ಕಬ್ಬು ಸಾಗಿಸುತ್ತಾರೆ. ಎಂದಿನಂತೆ ಭೀಮಾ ನದಿಯ ಸೇತುವೆ ಮಾರ್ಗವಾಗಿ ಕಬ್ಬು ಸಾಗಿಸುವಾಗ ತಡೆಗೋಡೆ ಇಲ್ಲದ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನದಿಗೆ ಉರುಳಿ ಬಿದ್ದಿದೆ.
ಟ್ರ್ಯಾಕ್ಟರ್ ನದಿಗೆ ಉರುಳುತ್ತಲೇ ಚಾಲಕ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದವರು ಈಜಿ ದಡ ಸೇರಿದ್ದಾರೆ.
ಮತ್ತೊಂದೆಡೆ ನದಿಗೆ ಬಿದ್ದಿರುವ ಟ್ರ್ಯಾಕ್ಟರ್ ಹಾಗೂ ಕಬ್ಬನ್ನು ಹೊರ ತೆಗೆಯಲು ಸ್ಥಳೀಯರು ರೈತನಿಗೆ ನೆರವು ನೀಡುತ್ತಿದ್ದಾರೆ.