ಹರಾಜು ಪ್ರಕ್ರಿಯೆ ಮುಂದೂಡಿಕೆಗೆ ಅಸಮಾಧಾನ
Team Udayavani, Sep 16, 2018, 2:39 PM IST
ತಾಳಿಕೋಟೆ: ಪುರಸಭೆ ಮಳಿಗೆಗಳ ಹರಾಜು ಪಕ್ರಿಯೆ ಹಾಗೂ ಹಣ ತುಂಬಿದ ಬಿಡ್ದಾರರ, ಅಂಗಡಿಕಾರರ ಪ್ರತಿಭಟನೆ
ಮಧ್ಯೆಯೇ ಮುಂದೂಡಲ್ಪಟ್ಟಿದೆ. ಪುರಸಭೆ ಸಂಬಂಧಿತ ಗುತ್ತಿಗೆ ಅವಧಿ ಮುಗಿದ ಬಸ್ ನಿಲ್ದಾಣದ ಎದುರಿನ ಮಳೆಗೆಗಳು, ಪುರಸಭೆಗೆ ಹೊಂದಿಕೊಂಡಿದ್ದ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಶನಿವಾರ ದಿನಾಂಕ ನಿಗದಿಪಡಿಸಿ ಸುಮಾರು 124 ಬಿಡ್ದಾರರಿಂದ ಪುರಸಭೆ ಹಣ ಆಕರಣೆ ಮಾಡಿಕೊಂಡು ಲಿಲಾವಿಗೆ ಮುಂದಾಗಿತ್ತು.
ಆದರೆ ಬೆಳಗ್ಗೆಯಿಂದ ಲಿಲಾವು ಪ್ರಕ್ರಿಯೆಗೆ ಬಿಡ್ದಾರರ ಹಣದ ಆಕರಣೆ ಮುಂದುವರಿದಿದ್ದರೆ, ಒಂದೆಡೆ ಅಂಗಡಿಕಾರರ ಪ್ರತಿಭಟನಾ ಧರಣಿ ಪುರಸಭೆ ಮುಂದೆ ಮುಂದುವರಿದಿತ್ತು. ಲಿಲಾವು ಪ್ರಕ್ರಿಯೆ ಕುರಿತು ಪುರಸಭೆ ಆಡಳಿತ ಮಂಡಳಿ
ಸದಸ್ಯರುಗಳ ಅಧಿಕಾರಿಗಳ ಸಭೆ ಮಾಡಲಾಗುತ್ತಿತ್ತು.
ಅಂಗಡಿಕಾರರ ಪ್ರತಿಭಟನೆ ಲೆಕ್ಕಿಸದೇ ಅಧಿಕಾರಿಗಳು ಲಿಲಾವು ಪ್ರಕ್ರಿಯೆಗೆ ಮುಂದಾದಾಗ ಧರಣಿನಿರತರು ಲಿಲಾವು ನಡೆಯುವ ಸ್ಥಳಕ್ಕಾಗಮಿಸಿ ಯಾವುದೇ ಕಾರಣಕ್ಕೂ ಲಿಲಾವು ಮುಂದೂಡಬಾರದು. ನಮ್ಮಿಂದ ದುಡ್ಡು ಆಕರಣೆ ಮಾಡಿಕೊಂಡಿದ್ದೀರಿ. ಲಿಲಾವು ಮುಂದೂಡುತ್ತ ಸಾಗಿದರೆ ನಮ್ಮ ಹಣಕ್ಕೆ ಬಡ್ಡಿ ಸೇರಿ ಹಣದ ಗ್ಯಾರಂಟಿ ಕೊಡುವವರು ಯಾರು ಎಂದು ಪ್ರಶ್ನಿಸಿದರು. ಇನ್ನೂ ಕೆಲವರು ಪುರಸಭೆಗೆ ತುಂಬಿದ ಹಣದ ಗ್ಯಾರಂಟಿ ನೀಡುವಂತೆ ಅಧಿಕಾರಿಗಳ
ಜತೆ ವಾಗ್ವಾದಕ್ಕಿಳಿದರು.
ಬಿಡ್ದಾರರು, ಅಂಗಡಿಕಾರರು ಅಧಿಕಾರಿಗಳ ನಡುವೆ ವಾಗ್ವಾದದ ನಡುವೆಯೂ ಅಧಿಕಾರಿಗಳು ಲಿಲಾವು ಪ್ರಕ್ರಿಯೆ ಅನಿರ್ದಿಷ್ಟಾವಧಿವರೆಗೆ ಮುಂದೂಡಲು ಮುಂದಾದರು.ಒಟ್ಟಾರೆ ಬಿಡ್ದಾರರು, ಅಂಗಡಿಕಾರರ ನಡುವೆ ನಡೆದ ಲಿಲಾವು ಪ್ರಕ್ರಿಯೆ ಮುಂದೂಡಲ್ಪಟ್ಟಿದ್ದು ಪುರಸಭೆ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯವರ ಮುಂದಿನ ಲಿಲಾವು ಪ್ರಕ್ರಿಯೆ ಕಾರ್ಯ ಯಾವ ರೀತಿಯಾಗಿ ಕೈಗೊಳ್ಳುತ್ತಾರೆಂಬುದರ ಮೇಲೆ ಎಲ್ಲರ ಜನರ ಕಣ್ಣು ನೆಟ್ಟಿದೆ.ಪಿಎಸ್ಐ ಜಿ.ಎಸ್. ಬಿರಾದಾರ, ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.