ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪಪಂಗೆ ಮುತ್ತಿಗೆ
Team Udayavani, Sep 24, 2020, 7:29 PM IST
ಕೊಲ್ಹಾರ: ಪಟ್ಟಣದಲ್ಲಿ ರಸ್ತೆ, ಚರಂಡಿ ನಿರ್ಮಿಸುವಂತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ನಾಗರಿಕರು ನ್ಯಾಯ ಕ್ರಾಂತಿ ಸಂಘಟನೆ ನೇತೃತ್ವದಲ್ಲಿ ಮುಖ್ಯ ರಸ್ತೆಗಳ ಮೂಲಕ ಜಾಥಾ ನಡೆಸಿ ಪಪಂಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ನ್ಯಾಯ ಕ್ರಾಂತಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ರಹೆಮಾನ್ ದುಂಡಶಿ ಮಾತನಾಡಿ, ಮಳೆಗೆ ಎಲ್ಲ ರಸ್ತೆಗಳು ಹಾಳಾಗಿದ್ದು ಪುನರ್ವಸತಿ ಕೇಂದ್ರ ಆದ ನಂತರ ಒಂದು ಬಾರಿಯೂ ರಸ್ತೆಗಳಿಗೆ ಒಂದು ಬುಟ್ಟಿ ಮಣ್ಣನ್ನು ಹಾಕಿಲ್ಲ. ಇದ್ದ ಕೆಲವೊಂದು ರಸ್ತೆಗಳನ್ನು ಯುಜಿಡಿ ಕಾಮಗಾರಿಯ ನೆಪದಲ್ಲಿ ಅಗೆದಿದ್ದು, ಸರಿಯಾಗಿ ಪುನಃ ದುರಸ್ತಿಗೊಳಿಸಿಲ್ಲ ಎಂದರು.
ಇದರಿಂದ ವೃದ್ಧರು ಮಹಿಳೆಯರು ಮಕ್ಕಳು ರಸ್ತೆ ಮೇಲೆ ನಡೆದುಕೊಂಡು ಹೋಗುವುದು ಬಹಳ ಕಷ್ಟಕರವಾಗಿದೆ. ಕೂಡಲೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ನಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ತಹಶೀಲ್ದಾರ್ ಎಂ.ಎ.ಎಸ್. ಬಾಗವಾನ ಅವರಿಗೆ ಮನವಿ ಸಲ್ಲಿಸಿದರು. ತೌಶಿಫ್ ಗಿರಗಾಂವಿ, ಬಸವರಾಜ ಕುಂಬಾರ, ಅಲ್ತಾಫ್ ಜಮಾದಾರ, ಸಲಿಂ ಕಂಕರಪೀರ, ಸಮಿರ್ ಚೌದ್ರಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.