ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಗರಂ
Team Udayavani, Feb 21, 2021, 5:30 PM IST
ಮುದ್ದೇಬಿಹಾಳ: ಗ್ರಾಮೀಣ ಜನರಿಗೆ ಸರ್ಕಾರದ ಸೌಲಭ್ಯ ಒದಗಿಸಲು ನಿರ್ಲಕ್ಷ್ಯ ತೋರಿಸುತ್ತಿರುವ ಅ ಧಿಕಾರಿಗಳ ವಿರುದ್ಧ ಗರಂ ಆಗಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬೈಲಕೂರ ಗ್ರಾಮದಲ್ಲಿ ತಾಲೂಕಾಡಳಿತದ ಅಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ನಡೆಯಿತು.
ತಂಗಡಗಿ ಭಾಗದಲ್ಲಿ ಪಶು ಸಂಗೋಪನೆ ಆಸ್ಪತ್ರೆ, ವೈದ್ಯರು ಇಲ್ಲ. ಹೀಗಾಗಿ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಅವು ಸಾವನ್ನಪ್ಪುತ್ತಿವೆ. ಇತ್ತೀಚೆಗೆ ನೂರಾರು ಕುರಿಗಳು ಸಾವನ್ನಪ್ಪಿ ಕುರಿಗಾರರು ಸಂಕಷ್ಟದಲ್ಲಿದ್ದಾರೆ ಎಂದು ಕೆಲವರು ನೇರವಾಗಿಯೇ ತಹಶೀಲ್ದಾರ್ ಹಾಗೂ ಪಶು ಸಂಗೋಪನಾ ಇಲಾಖೆಯ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಎಡಿ ಡಾ|ಶಿವಾನಂದ ಮೇಟಿ ಈಗಾಗಲೇ ತಂಗಡಗಿ ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನಿಯೋಜನೆ ಪ್ರಸ್ತಾಪ ಮೇಲಧಿಕಾರಿಗಳಿಗೆ ಸಲ್ಲಿಸಿದೆ ಎಂದರು.
ಕಂದಾಯ ಇಲಾಖೆಯಡಿ ಜಮೀನುಗಳ ಪೋಡಿ ಪ್ರಕರಣ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಗ್ರಾಮಲೆಕ್ಕಾ ಧಿಕಾರಿಗಳು ಪೋಡಿ ಪ್ರಕರಣದಲ್ಲಿ ವಿನಾಕಾರಣ ಸತಾಯಿಸುತ್ತಾರೆ. ತಹಶೀಲ್ದಾರ್ ಕಚೇರಿಯಲ್ಲೂ ಸ್ಪಂದನೆ ಸಿಗುತ್ತಿಲ್ಲ ಎಂದು ಕೆಲವರು ಆರೋಪಿಸಿದರು.
ಕಾಲ್ನಡಿಗೆಯಲ್ಲಿ ಪರಿಶೀಲನೆ: ಅ ಧಿಕಾರಿಗಳ ತಂಡ ಗ್ರಾಮದ ವಿವಿಧೆಡೆ ಸಂಚರಿಸಿ ವಸ್ತುಸ್ಥಿತಿ ಅವಲೋಕಿಸಿತು. ಈ ವೇಳೆ ವಾರ್ಡ್ ಗಳ ಜನತೆಯ ಅಹವಾಲು ಆಲಿಸಿ ದಾಖಲಿಸಿಕೊಳ್ಳಲಾಯಿತು. ಗ್ರಾಮದಲ್ಲಿ ಕೆಲವು ಓಣಿಗಳಲ್ಲಿ ಇನ್ನೂ ರಸ್ತೆ ಇಲ್ಲದ್ದರಿಂದ ಬಚ್ಚಲು ನೀರು ರಸ್ತೆ ಮೇಲೆಯೇ ಹರಿದು, ಅಲ್ಲಲ್ಲಿ ಕೊಳಚೆ ಸೃಷ್ಟಿಯಾಗಿ ಅನಾರೋಗ್ಯಕರ ಪರಿಸರ ಸೃಷ್ಟಿಯಾಗಿದ್ದನ್ನು ಕಂಡು ಗ್ರಾಪಂ ಪಿಡಿಒಗೆ ಸೂಚಿಸಿ ಸ್ವತ್ಛತೆಗೆ ಕ್ರಮ ಕೈಕೊಳ್ಳುವಂತೆ ಸೂಚಿಸಿದರು.
ಪಿಡಬ್ಲೂಡಿ ಅಧಿಕಾರಿ ಗೈರು: ವಾಸ್ತವ್ಯಕ್ಕೆ ಪಿಡಬ್ಲೂಡಿ ಅಧಿಕಾರಿಗಳು ಬಂದಿರಲಿಲ್ಲ. ಹೀಗಾಗಿ ಅವರ ಇಲಾಖೆ ಕುರಿತು ಚರ್ಚಿಸಲು, ಅಹವಾಲು ಸಲ್ಲಿಸಲು ಜನರಿಗೆ ಅವಕಾಶ ಸಿಗಲಿಲ್ಲ. ಇದರಿಂದ ಕೆಲವರು ಆಕ್ರೋಶಗೊಂಡು ಅಧಿ ಕಾರಿಗಳ ಬೇಜವಾಬ್ದಾರಿತನವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಶಿಸ್ತು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿದರು.
ವಿವಿಧ ಇಲಾಖೆಗಳ ಅಧಿ ಕಾರಿಗಳು, ಪ್ರತಿನಿಧಿಗಳಾದ ರೇವಣೆಪ್ಪ ಮನಗೂಳಿ, ಎಸ್.ಎಸ್.ಹಂದ್ರಾಳ, ಜಿ.ಎಸ್. ಶೀಲವಂತ, ಅಯ್ಯಪ್ಪ ಮಲಗಲದಿನ್ನಿ, ಡಾ|ಶಿವಾನಂದ ಮೇಟಿ, ಎನ್.ಬಿ.ನಾಟಿಕಾರ, ಉಮೇಶ ಲಮಾಣಿ, ಎ.ಎಸ್ .ಬಾಗವಾನ, ಎಲ್.ಬಿ.ಜಾಧವ, ಕೆ.ಎಂ.ಬಿದರಕುಂದಿ, ಡಾ|ಎಂ. ಎಸ್.ಪಾಟೀಲ, ಎಸ್.ಎಸ್.ಟಾಕಳಿ, ಜಿ.ವೈ.ಬಶೆಟ್ಟಿ, ಆರ್. ಎನ್.ಹಾದಿಮನಿ, ಚಂದ್ರಶೇಖರ, ಪಿ.ಆರ್.ಹಜೇರಿ, ಎಂ.ಎಂ. ಮದಭಾವಿ, ರಾಜೀವ ಬಿರಾದಾರ, ಅನೀಲಕುಮಾರ ಚವ್ಹಾಣ, ಎಂ.ಎಚ್.ತೇಲಿ, ರಾಹುಲ್ ಹೊನಸೂರೆ, ಡಿ.ಎನ್.ಕೋಗಲ್ಲ, ಎಚ್.ಆರ್.ಗುಡಗುಂಟಿ, ಎಂ.ಎ.ಮಾಗಿ, ವೀರೇಶ ಬಟಕುರ್ಕಿ, ಮುಲ್ಲಾ, ಯಂಕಪ್ಪ ಕ್ಷತ್ರಿ ಸೇರಿ 32 ಜನ ಭಾಗವಹಿಸಿದ್ದರು. ಬಿಜೆಪಿ ಧುರೀಣ ಜಗದೀಶ ಪಂಪಣ್ಣವರ ಇತರರಿದ್ದರು.