ಹೊಳೆ ಬಬಲಾದಿ ಸ್ವಾಮೀಜಿ ವಾಣಿ ಅಪಾರ್ಥ ಮಾಡಿಕೊಂಡ ಭಕ್ತರು: ಮಠಕ್ಕೆ ಬಂದ ಸಾವಿರಾರು ಭಕ್ತರು
Team Udayavani, May 24, 2021, 6:04 PM IST
ವಿಜಯಪುರ: ಜಿಲ್ಲೆಯ ಸ್ವಾಮೀಜಿಯೊಬ್ಬರು ಭಕ್ತರಿಗೆ ನೀಡಿದ ವಿಡಿಯೋ ಸಂದೇಶದ ಸಾರ ಅರಿಯದೇ ಅಪಾರ್ಥ ಮಾಡಿಕೊಂಡ ಭಕ್ತರು ಕೋವಿಡ್ ಕರ್ಫ್ಯೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೃದ್ಯ ಸಮರ್ಪಿಸಲು ಬಬಲಾದಿ ಮಠಕ್ಕೆ ಆಗಮಿಸಿದ ಘಟನೆ ಜರುಗಿದೆ.
ವಿಜಯಪುರ ಜಿಲ್ಲೆಯಲ್ಲಿ ಮದ್ಯದ ನೈವೇದ್ಯ ಜಾತ್ರೆ ನಡೆಯುವ ಮಠ ಎಂದೇ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠದ ಸಿದ್ಧರಾಮಯ್ಯ ಶ್ರೀಗಳು ಈ ಬಾರಿ ಕೋವಿಡ್ ಕರ್ಫ್ಯೂ ಮೀರಿ ಜನರು ಮನೆಯಿಂದ ಹೊರಗೆ ಬರಬೇಡಿ. ಬದಲಾಗಿ ಮನೆಯಲ್ಲೇ ಅಂಬಲಿ ನೈವೇದ್ಯ ಮಾಡಿ ಮುತ್ಯಾನಿಗೆ ಸಮರ್ಪಿಸಿ ಎಂದು ಸಂದೇಶ ನೀಡಿದ್ದರು.
ಮದ್ಯದ ನೈವೇದ್ಯ ಬೇಡ ಬೇಡ ಎಂದು ಕಾರ್ಣಿಕ ಹೇಳಿದರೂ ಶ್ರೀಗಳ ಹೇಳಿಕೆಯನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತ ಸಮೂಹ, ಕೋವಿಡ್ ಕರ್ಫ್ಯೂ ಮೀರಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಸೋಮವಾರ ಅಂಬಲಿ ನೈವೇದ್ಯ ಅರ್ಪಿಸಲು ಬಬಲಾದಿ ಮಠಕ್ಕೆ ಧಾವಿಸಿದ್ದು, ಪೊಲೀಸರು, ಮಠಕ್ಕೆ ಬಂದ ಭಕ್ತರನ್ನು ಮರಳಿ ಕಳಿಸುವಲ್ಲಿ ಹೆಣಗಾಡುವಂತೆ ಮಾಡಿದೆ.
ಹೊಳೆ ಬಬಲಾದಿ ಮಠದ ಸದಾಶಿವ ಮಠದ ಸಿದ್ಧರಾಮಯ್ಯ ಶ್ರೀಗಳು ಎರಡು ವರ್ಷಗಳ ಹಿಂದೆ ಸದಾಶಿವ ಮಠದ ಕಾರ್ಣಿಕದ ಸಂದರ್ಭದಲ್ಲಿ ವೈದ್ಯರಿಗೂ ಮದ್ದು ತಿಳಿಯದ ರೋಗ ಜನರನ್ನು ಕಾಡಲಿದೆ ಎಂದು ಕಾರ್ಣಿಕ ಹೇಳಿದ್ದರು. ಭವಿಷ್ಯದ ದಿನಗಳಲ್ಲಿ ಔಷಧಿಯೇ ಸಿಗದ ಕೋವಿಡ್ ಸಾಂಕ್ರಾಮಿಕ ಸೋಂಕು ರೋಗ ಬಾಧಿಸಿತ್ತು. ಇದೀಗ ಕೋವಿಡ್ ಎರಡನೇ ಅಲೆ ಜೋರಾಗಿರುವ ಸಂದರ್ಭದಲ್ಲಿ ಸರ್ಕಾರ ರೋಗ ನಿಗ್ರಹಕ್ಕಾಗಿ ಕೋವಿಡ್ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಶ್ರೀಗಳು ಆತಂಕದಲ್ಲಿರುವ ಭಕ್ತರು ಈ ಬಾರಿ ರೋಗ ಇನ್ನೂ ಉಲ್ಬಣಗೊಂಡಿದೆ. ನಿಯಂತ್ರಣಕ್ಕೆ ಪರಿಹಾರ ನೀಡಿ ಎಂದು ಹಲವು ಭಕ್ತರು ಮೊರೆ ಇಟ್ಟಿದ್ದರು.
ಹೀಗಾಗಿ ಬಬಲಾದಿ ಸಿದ್ದರಾಮಯ್ಯ ಶ್ರೀಗಳು, ಸೋಮವಾರ ಭಕ್ತರು ಮದ್ಯಕ್ಕೆ ಬದಲಾಗಿ ಅಂಬಲಿ ನೈವೇದ್ಯ ಮಾಡಿ ಮನೆಯಲ್ಲೇ ಸಮರ್ಪಿಸಿ, ಎರಡು ಬೋಳು ಕಾಯಿ ಒಡೆಯಿರಿ. ಹುರಿದ, ಕರಿದ ಅಡುಗೆ ಮಾಡಬೇಡಿ ಹಾಗೂ ಮನೆಯಿಂದ ಹೊರಗೆ ಬರಬೇಡಿ. ಮನೆಯಲ್ಲೇ ನೆಮ್ಮದಿಯಾಗಿರಿ ಎಂದು ವಿಡಿಯೋ ಮೂಲಕ ಮೂಲಕ ಸಾತ್ವಿಕ ಸಂದೇಶ ನೀಡಿದ್ದರು.
ಆದರೆ ಸಿದ್ದರಾಮಯ್ಯ ಶ್ರೀಗಳ ಸಂದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತರು, ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮೇತ ಗುಂಪು ಗುಂಪಾಗಿ ಶ್ರೀಮಠಕ್ಕೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಪೊಲೀಸರು ಭಕ್ತರ ಮನವೊಲಿಸಿ ಮರಳಿ ಮನೆಗೆ ಕಳಿಸಲು ಹರಸಾಹಸ ಪಡುವಂತೆ ಮಾಡಿದೆ.
ಇದರಿಂದ ಮತ್ತೊಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಿದ್ಧರಾಮಯ್ಯ ಶ್ರೀಗಳು, ಭಕ್ತರು ಯಾರೂ ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ. ಮಠಕ್ಕೂ ಆಗಮಿಸಬೇಡಿ. ಕೋವಿಡ್ ಕರ್ಫ್ಯೂ ಉಲ್ಲಂಘಿಸದೇ ಮನೆಯಲ್ಲೇ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ ಎಂದು ಸಂದೇಶ ನೀಡಿದ್ದಾರೆ.
ಇದನ್ನೂ ಓದಿ : ಜನ ಜಂಗುಳಿ ನಿಯಂತ್ರಿಸದೇ ಕೋವಿಡ್ ತಡೆ ಅಸಾಧ್ಯ
ಅಂಬಲಿ ಎಂದರೆ ಜೋಳದ ನುಚ್ವಿಗೆ ಮಜ್ಜಿಗೆ, ಬೆಳ್ಳುಳ್ಳಿ ಬೆರೆಸಿದ ಗಂಜಿ ರೂಪದ ತೆಳುವಾದ ಆಹಾರವೇ ಅಂಬಲಿ. ಈ ಅಂಬಲಿ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಕಾರಣಕ್ಕೆ ಶ್ರೀಗಳು ಅಂಬಲಿ ಸಂದೇಶ ನೀಡಿದ್ದರು.
ಕೋವಿಡ್ ಸಂಕಷ್ಟ ಕಾಲದಲ್ಲಿ ಮನೆಯಲ್ಲಿಯೇ ಇರಿ ಎಂದು ಹಾಗೂ ಪೌಷ್ಠಿಕ ಆಹಾರವಾದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಕುಡಿಯಿರಿ ಎಂದು ನೀಡಿದ ಸಂದೇಶ ಮುಗ್ದ ಭಕ್ತರು ಅರ್ಥೈಸುವಿಕೆಯಲ್ಲಿ ಮಾಡಿಕೊಂಡ ಗೊಂದಲ ಶ್ರೀಗಳನ್ನು, ಪೊಲೀಸರನ್ನು ಹೈರಾಣು ಮಾಡಿದೆ.