ವೈರಲ್: ಪಂಪ್ ಇಲ್ಲದೇ ಇದ್ದರೂ ಕೊಳವೆ ಬಾವಿಯಿಂದ ಮುಗಿಲೆತ್ತರ ಚಿಮ್ಮಿದ ನೀರು
Team Udayavani, Oct 20, 2019, 11:01 AM IST
ವಿಜಯಪುರ: ಕಳೆದ ನಾಲ್ಕಾರು ದಿನಗಳಿಂದ ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ವಿಫಲವಾಗಿದ್ದ ಕೊಳವೆ ಬಾವಿಯಿಂದ ಮುಗಿಲೆತ್ತರಕ್ಕೆ ಸ್ವಯಂ ನೀರು ಚಿಮ್ಮತೊಡಗಿದೆ.
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಕೊಳವೆ ಬಾವಿಯ ನೀರು ತಾನೇತಾನಾಗಿ ಮುಗಿಲಿಗೆ ಜಿಗಿಯ ತೊಡಗಿದೆ.
ಮಾಳಿಂಗರಾಯ ದೊಡ್ಡಮನಿ ಎಂಬವರು ಈ ಹಿಂದೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಸ್ಥಗಿತಗೊಂಡಿತ್ತು.
ಆದರೆ ಇದೀಗ ಇದ್ದಕ್ಕಿದ್ದಂತೆ ನೀರು ಸ್ವಯಂ ಹೊರ ಸೂಸುತ್ತಿದೆ. ಈ ಮೊದಲು ನೀರು ಬರುತ್ತಿದ್ದ ಕೊಳವೆ ಬಾವಿ ಮಳೆಯ ಕೊರತೆ ಕಾರಣ ವಿಫಲಗೊಂಡಿತ್ತು.
ಇದೀಗ ಆಕಾಶದೆತ್ತರಕ್ಕೆ ಚಿಮ್ಮುವ ನೀರಿನ ಸುತ್ತಲಿನ ಜನರಲ್ಲಿ ಹರ್ಷದ ಜೊತೆ ವಿಸ್ಮಯ ಮೂಡಿಸಿ, ಆಶ್ವರ್ಯಗೊಳಿಸಿದೆ.
ಹಲವು ವರ್ಷಗಳ ಹಿಂದೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಇರದ ಕಾರಣ ಈ ಕೊಳವೆ ಬಾವಿಗೆ ಅಳವಡಿಸಿದ್ದ ಪಂಪ್ ತೆಗೆಯಲಾಗಿತ್ತು. ಇದೀಗ ಪಂಪ್ ಇಲ್ಲದೆ ಇದ್ದಕ್ಕಿದ್ದಂತೆ ನೀರು ಸ್ವಯಂ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದು ರೈತ ಮಾಳಿಂಗ ರಾಯ ಅವರ ಮೊಗದಲ್ಲಿ ಸಂತಸ ಮೂಡಿಸಿದೆ.