ಭೀಮನ ಬಾವಿ ಸ್ವಚ್ಛತಾ ಕಾರ್ಯ
Team Udayavani, Jul 4, 2022, 3:03 PM IST
ತಾಳಿಕೋಟೆ: ಖಾಸ್ಗತೇಶ್ವರ ಮಠದ ಗಂಗಸ್ಥಳದ ಮೂಲ ಸ್ಥಾನವಾಗಿರುವ ರಾಜವಾಡೆಯಲ್ಲಿಯ ಪುರಾತನ ಭೀಮನ ಬಾವಿ ಸ್ವತ್ಛತಾ ಕಾರ್ಯ ಶ್ರೀಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರ ಸಮ್ಮುಖದಲ್ಲಿ ರವಿವಾರ ಬೆಳಗ್ಗೆ 7ರಿಂದ 10ರವರೆಗೆ ಭಕ್ತ ಸಮೂಹದಿಂದ ನಡೆಯಿತು.
ಸುಮಾರು ಮೂರು ವರ್ಷದಿಂದ ಕಾಡಿದ ಕೊರೊನಾದಿಂದ ಖಾಸ್ಗೇಶ್ವರ ಜಾತ್ರಾ ಮಹೋತ್ಸವವನ್ನು ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಕೇವಲ ಪೂಜೆ ಸೀಮಿತಗೊಳಿಸಲಾಗಿತ್ತು. 3 ವರ್ಷಗಳಿಂದ ಗಂಗಸ್ಥಳ ಕಾರ್ಯ ಭೀಮನ ಬಾವಿಯಲ್ಲಿ ನಡೆಯದ ಕಾರಣ ಬಾವಿಯಲ್ಲಿ ಕಲ್ಲು ಚಿಪ್ಪಡಿಗಳು, ಕಪ್ಪೆ ಜೊಂಡು ಅಲ್ಲದೇ ಕಟ್ಟಿಗೆ ಇನ್ನಿತರಗಳಿಂದ ಹೂಳು ತುಂಬಿಕೊಂಡಿತ್ತು. ಇದನ್ನು ಗಮನಿಸಿದ ಖಾಸ್ಗತ ಭಕ್ತ ವೃಂದ ಹಾಗೂ ಸಾಮಾಜಿಕ ಕಾರ್ಯಕರ್ತರ ಪಡೆ ರವಿವಾರ ಬಾವಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಾವಿಯಲ್ಲಿಯ ಶೇ. 90ರಷ್ಟು ಸ್ವಚ್ಛಗೊಳಿಸುವುದರೊಂದಿಗೆ ಬಾವಿಗೆ ಪುನಶ್ಚೇತನ ನೀಡುವ ಕಾರ್ಯವನ್ನು ಮಾಡಿರುವುದು ಜನರ ಪ್ರಶಂಸೆಗೆ ಕಾರಣವಾಗಿದೆ.
ಸುಮಾರು ನೂರಾರು ವರ್ಷಗಳ ಪುರಾತನ ಭೀಮನ ಬಾವಿ ಸ್ವಚ್ಛಂದವಾಗಿ ಮತ್ತು ಜನರ ಉಪಯೋಗಕ್ಕೆ ಬರುವಂತೆ ಸ್ವತ್ಛಗೊಳಿಸಲಾಯಿತು. ಈ ಬಾವಿಯಲ್ಲಿ ಕೇವಲ ಜಾತ್ರಾ ಉತ್ಸವಗಳ ಗಂಗಸ್ಥಳ ಅಷ್ಟೇ ಅಲ್ಲದೇ ಪಟ್ಟಣದಲ್ಲಿ ವಿವಿಧ ವೈಯಕ್ತಿಕ ಮದುವೆ, ಮುಂಜುವಿ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿರುವ ಬಾವಿ ಇದೊಂದೆ ಆಗಿದೆ. ಇದನ್ನು ಗಮನಿಸಿದ ಭಕ್ತರು ನಮ್ಮೂರಿನ ಹೆಮ್ಮೆಯ ಭೀಮನ ಬಾವಿಯನ್ನು ಸ್ವಚ್ಛಗೊಳಿಸಲು ವಿವಿಧ ರೀತಿಯ ತಂಡಗಳನ್ನು ರಚಿಸಿಕೊಂಡು ಸ್ವಚ್ಛತೆಗೆ ಮುಂದಾಗಿದ್ದು ಶ್ಲಾಘನೀಯವಾಗಿದೆ. ಈ ಬಾರಿ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಜು. 4ರಿಂದ ಆರಂಭಗೊಳ್ಳಲಿದ್ದು ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ತಯಾರಿ ಕೈಗೊಳ್ಳಲಾಗುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ಪುರಸಭೆ ಸದಸ್ಯರು, ಖಾಸ್ಗತ ಭಕ್ತವೃಂದ ಅಲ್ಲದೇ ಶ್ರೀಮಠದ ಸೇವಕರು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.