ಮಹಿಳಾ ಕ್ರಿಕೆಟರ್ ರಾಜೇಶ್ವರಿ ವಿರುದ್ಧ ಸೂಪರ್ ಮಾರ್ಕೆಟ್ ನಲ್ಲಿ ದಾಂಧಲೆ ಆರೋಪ
Team Udayavani, Dec 1, 2022, 3:43 PM IST
ವಿಜಯಪುರ: ಭಾರತೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕವಾಡ ವಿರುದ್ಧ ಸೂಪರ್ ಮಾರ್ಕೆಟ್ ಮಾಲೀಕರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ನಗರದ ಸೋಲಾಪುರ ರಸ್ತೆಯಲ್ಲಿನ ಉಮದಿ ಸೂಪರ್ ಮಾರ್ಕೆಟ್ ಗೆ ರಾಜೇಶ್ವರಿ ಶಾಪಿಂಗ್ ಗೆ ತೆರಳಿದ್ದರು. ಈ ವೇಳೆ ರಾಜೇಶ್ವರಿ ಗಾಯಕವಾಡ ಸೌಂದರ್ಯವರ್ಧಕ ಬಾಟಲಿಗಳ ಸೀಲ್ ತೆಗೆದು ಪರೀಕ್ಷಿಸಲು ಮುಂದಾದಾಗ ಸಿಬ್ಬಂದಿ ಆಕ್ಷೇಪಿಸಿದ್ದಾರೆ. ಇದರಿಂದ ಕುಪಿತರಾದ ರಾಜೇಶ್ವರಿ ಕೂಗಾಟ ಆರಂಭಿಸಿದಾಗ ಮಾಲೀಕರು ಮಧ್ಯಪ್ರವೇಶ ಮಾಡಿದ್ದಾರೆ. ಈ ಹಂತದಲ್ಲಿ ಮೊಬೈಲ್ ಕರೆ ಮಾಡಿ ತನ್ನ ಬೆಂಬಲಿಗರನ್ನು ಕರೆಸಿಕೊಂಡಿರುವ ರಾಜೇಶ್ವರಿ ಗಾಯಕವಾಡ ಹಲ್ಲೆ ನಡೆಸಿದ್ದಾಗಿ ಮಲ್ಲಿಕಾರ್ಜುನ ಎಂಬವರು ದೂರಿದ್ದಾರೆ.
ರಾಜೇಶ್ವರಿ ಗಾಯಕವಾಡ ಉಮದಿ ಸೂಪರ್ ಮಾರ್ಕೆಟ್ ಭೇಟಿ, ಗಲಾಟೆ, ಬೆಂಬಲಿಗರಿಂದ ಹಲ್ಲೆ ನಡೆಸಿದ ಘಟನೆಗಳು ಸಿಸಿ ಕೆಮೆರಾದಲ್ಲಿ ದಾಖಲಾಗಿವೆ.
ಈ ಕುರಿತು ಉಮದಿ ಸೂಪರ್ ಮಾರ್ಕೆಟ್ ಮುಖ್ಯಸ್ಥ ಮಲ್ಲಿಕಾರ್ಜುನ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಯಾರೂ ಲಿಖಿತ ದೂರು ನೀಡದ ಕಾರಣ ದೂರು ದಾಖಲಾಗಿಲ್ಲ ಎಂದು ಎಸ್ಪಿ ಆನಂದಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.