ನಾಡು-ನುಡಿ ರಕ್ಷಣೆಗೆ ಮುಂದಾಗಿ
Team Udayavani, Nov 11, 2019, 6:27 PM IST
ಚಡಚಣ: ಗಡಿಯಲ್ಲಿ ಕನ್ನಡ ಭಾಷೆ ಬೆಳಗಬೇಕು, ಅರಳಬೇಕು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ನಾಯಕರನ್ನು ನೆನಪಿಸಿಕೋಳ್ಳುತ್ತ ನಮ್ಮ ನಾಡು-ನುಡಿ ನಮ್ಮ ಉಸಿರಾಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ರೇವತಗಾಂವ ಗ್ರಾಮದಲ್ಲಿ ನಡೆದ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಾಂಬೆ ಸೇವೆಗಾಗಿ ನಾವು ಸದಾ ಸಿದ್ಧರಿರಬೇಕು. ಕನ್ನಡ ತಾಯಿ ರಕ್ಷಣೆ ನಮ್ಮೆಲ್ಲರ ಹೋಣೆಯಾಗಬೇಕು ಎಂದರು. ಇದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಗ್ರಾಮದ ರಾವುಸಾಬ ಪೂಜಾರಿ ನಾಡ ಧ್ವಜಾರೋಹಣ ನೆರವೇರಿಸಿದರು. ನಾಡ ದೇವಿಗೆ ಅಮಸಿದ್ಧ ಪೂಜಾರಿ, ಖಂಡಪ್ಪ ನಡಗೇರಿ ಪೂಜೆ ಸಲ್ಲಿಸಿದರು. ಚನ್ನಪ್ಪ ಜಿಗಜಿಣಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧ್ವಜಾರೋಹಣವನ್ನು ನೆರವೇರಿಸಿ ವೀರ ಯೋಧ ರಾವುಸಾಬ ಪೂಜಾರಿ ಮಾತಾನಾಡಿ, ಕರ್ನಾಟಕದ ಮೂಲ ನೆಲೆ, ಕರ್ನಾಟಕಕ್ಕೆ ಕರ್ನಾಟಕ ಎಂಬ ಹೆಸರು ಬರಲು ಕಾರಣವಾದ ಅಂಶ, ಕನ್ನಡ ಭಾಷೆ ಮೂಲ ಸ್ಥಾನ, ಕನ್ನಡ ಭಾಷೆ ಬೆಳೆದ ಬಗೆ ಕುರಿತು ಸವಿಸ್ತಾರವಾಗಿ ತಿಳಿಸಿ ಹೇಳಿದರು.
ಗ್ರಾಮದ ಮಕ್ಕಳಿಂದ ಹಿಡಿದು ವಯೋವೃದ್ಧರವರಗಿನ ಎಲ್ಲ ವಯೋಮಾನದವರ ನೇತೃತ್ವದಲ್ಲಿ ನಾಡದೇವಿ ಮೆರವಣಿಗೆಗೆ ಮಹಾದೇವ ಅಂಕಲಗಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ಮೇಳದವರೊಂದಿಗೆ ಕನ್ನಡದ ಜಯ ಘೋಷಗಳೊಂದಿಗೆ ಮೆರವಣಿಗೆ ಸಂಚರಿಸಿತು.
ಚಡಚಣ ಪಿಎಸೈ ಮಹಾದೇವ ಎಲಿಗಾರ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಭೀಮಾ ನದಿ ಕೃಷಿಯನ್ನು ಮಾಡಿ ಎಂದು ಹರಿಯುತ್ತಿದೆ. ಆದರೆ ನಾವು ಭೀಮೆ ಮರಳನ್ನು ಮಾರಿದರೆ ತಾಯಿ ಕರಳನ್ನು ಬಗೆದಂತಾಗುತ್ತದೆ. ತಾಯಿಯ ಕರಳನ್ನು ಬಗೆದವರು ಯಾರು ಉಳಿದಿಲ್ಲ ಎಂದರು.
ನಮ್ಮ ದೇಹವನ್ನು ರಕ್ಷಣೆ ಮಾಡುವುದು ಎಂದರೆ ಪರಶುದ್ಧವಾದ ಆತ್ಮ, ಪರಿಶುದ್ಧವಾಗಿ ಮಾತನಾಡುವ ನಾಲಿಗೆ. ಇವೆರಡು ನಮ್ಮನ್ನು ರಕ್ಷಣೆ ಮಾಡುತ್ತದೆ. ಎಲ್ಲ ಪ್ರಾಣಿಗಳು ತಮ್ಮ ಜೀವನವನ್ನು ಮಾಡುತ್ತವೆ. ನಮ್ಮ ಸಂಬಂಧ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಭಾವನೆಗಳನ್ನು ಬೆಳೆಸುವುದೇ ಜೀವನ ಎಂದು ಹೇಳಿದರು.
ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಲ್ಲಿಕಾರ್ಜುನ ಜಾಬಗೊಂಡೆ, ಸಿದ್ರಾಮ ಮಾಳಿ ಹಾಗೂ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಉಮರಜ್ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ತನುಜಾ ಗುಡ್ಡಾಪುರ ಅವರನ್ನು ಸನ್ಮಾನಿಸಲಾಯಿತು. ಬಿ.ಜಿ. ಸಾಹುಕಾರ, ಎಸ್.ಡಿ. ಪಾಟೀಲ, ಶ್ರೀಶೈಲಗೌಡ ಬಿರಾದಾರ, ಗೋಪಾಲ ಕಾರಜೋಳ, ಕಲ್ಲಪ್ಪ ಉಟಗಿ, ಭೀಮು ಬಿರಾದಾರ, ಪ್ರಕಾಶಗೌಡ ಪಾಟೀಲ, ಅಜೀತ ತಳ್ಳೆ ಇದ್ದರು.