ಚಾಮರಾಜನಗರ: 50 ಅಡಿ ಆಳದ ತೆರೆದ ಬಾವಿಗೆ ಬಿದ್ದ ಹಸು; ಅಗ್ನಿಶಾಮಕ ಅಧಿಕಾರಿಗಳಿಂದ ರಕ್ಷಣೆ
Team Udayavani, Aug 21, 2020, 7:17 PM IST
ಹನೂರು( ಚಾಮರಾಜನಗರ): ಆಯ ತಪ್ಪಿ 50 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಹನೂರು ತಾಲೂಕಿನ ಕೌದಳ್ಳಿ ಸಮೀಪದ ಎಂ.ಜಿ.ದೊಡ್ಡಿ ಗ್ರಾಮದ ಶಾಂತರಾಜು ಎಂಬುವವರು ತಮ್ಮ ಹಸುವನ್ನು ಶುಕ್ರವಾರ ಬೆಳಿಗ್ಗೆ ಜಮೀನಿನಲ್ಲಿ ಮೇಯ್ಯಲು ಬಿಟ್ಟಿದ್ದರು. ಈ ವೇಳೆ ಮೇಯ್ಯುತ್ತಿದ್ದ ಹಸು ಆಯತಪ್ಪಿ ಪಕ್ಕದಲ್ಲಿ ಇದ್ದ 50 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಹನೂರು ಪಟ್ಟಣದ ಅಗ್ನಿಶಾಮಕ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಇಲಾಖಾ ಠಾಣಾಧಿಕಾರಿ ಶೇಷ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅದೃಷ್ಟವಶಾತ್ ಹಸುವಿಗೆ ಯಾವುದೇ ತೊಂದರೆಯಾಗಿಲ್ಲ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಗಿರೀಶ್, ನಾಗೇಶ್, ಜಯಪ್ರಕಾಶ್, ಆನಂದ್ ಇನ್ನಿತರರು ಭಾಗವಹಿಸಿದ್ದರು.