ಬೈಕ್ಗೆ ಢಿಕ್ಕಿ ಹೊಡೆದ ಕಾರು: ಪೇದೆ ಸಾವು, ಎಎಸ್ಸೈಗೆ ಗಾಯ
Team Udayavani, Apr 13, 2022, 5:06 PM IST
ಚಾಮರಾಜನಗರ: ಕರ್ತವ್ಯದ ರಾತ್ರಿ ಗಸ್ತಿನಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಪೊಲೀಸರಿಗೆ ಕಾರು ಢಿಕ್ಕಿಯಾಗಿ ಕಾನ್ಸ್ಟೇಬಲ್ ಮೃತಪಟ್ಟು, ಎಎಸ್ಐ ಗಾಯಗೊಂಡಿರುವ ಘಟನೆ ತಾಲೂಕಿನ ಸಂತೆಮರಹಳ್ಳಿ ಸಮೀಪ ಹುಲ್ಲೇಪುರದ ಬಳಿ ನಡೆದಿದೆ.
ತಾಲೂಕಿನ ಇರಸವಾಡಿ ನಿವಾಸಿ ಮತ್ತು ಸಂತೇಮರಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಪ್ರಸಾದ್ (34) ಮೃತರು. ಸಹಾಯಕ ಸಬ್ಇನ್ಸ್ ಪೆಕ್ಟರ್ ರಾಜು ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ (948) ಯಲ್ಲಿ ಸಿಗುವ ಹುಲ್ಲೇಪುರ ಮಾರ್ಗವಾಗಿ ಕರ್ತವ್ಯ ನಿಮಿತ್ತ ಕೆಂಪನಪುರಕ್ಕೆ ಪ್ರಸಾದ್ ಮತ್ತು ರಾಜು ಬೈಕ್ನಲ್ಲಿ ತೆರಳುತ್ತಿದ್ದರು. ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್ಗೆ ಢಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಪ್ರಸಾದ್ ಮೃತಪಟ್ಟರೆ, ಬೈಕ್ನ ಹಿಂಭಾಗ ಕುಳಿತಿದ್ದ ರಾಜು ಗಂಭೀರವಾಗಿ ಗಾಯಗೊಂಡರು.
ಕಾರಿನ ಚಾಲಕನಿಗೂ ಗಾಯಗಳಾಗಿವೆ. ಪ್ರಸಾದ್ ಕೆಲವು ವರ್ಷಗಳ ಹಿಂದೆ ನಾಗವಳ್ಳಿಯ ಯುವತಿಯನ್ನು ವಿವಾಹವಾಗಿದ್ದರು. ಇವರಿಗೆ ಒಂದು ತಿಂಗಳ ಮಗುವಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.