ಅಂಗನವಾಡಿ ನೌಕರರ ಬೇಡಿಕೆ ಈಡೇರಿಸಿ
Team Udayavani, Jul 15, 2020, 8:53 AM IST
ಯಳಂದೂರು: ಅಂಗನವಾಡಿ ನೌಕರರಿಗೆ ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚಿನ ರಕ್ಷಣೆ ಒದಗಿಸಬೇಕು ಹಾಗೂ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದ ಸಿಡಿಪಿಒ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಟ್ಟಬಸಮ್ಮ ಮಾತನಾಡಿ, ಅಂಗನವಾಡಿ ನೌಕರರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ಸ್ಥಳೀಯ ಸಾರಿಗೆ ಉಚಿತ ಬಸ್ಪಾಸ್, ಊಟದ ವೆಚ್ಚ ಭರಿಸಬೇಕು. ಎಲ್ಐಸಿ ಆಧಾರಿತ ನಿವೃತ್ತಿ ವೇತನ ನೀಡಬೇಕು. ಮೇಲ್ವಿಚಾರಕಿಯರ ಹುದ್ದೆಗೆ ಶೇ.100ರಷ್ಟು ಮೀಸಲಾತಿ ಹಾಗೂ ಸೇವಾ ಹಿರಿತನದ ಆಧಾರದಲ್ಲಿ ಮುಂಬಡ್ತಿ ನೀಡಬೇಕು. ಅಂಗನವಾಡಿಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದರು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ನಂತರ ಕಚೇರಿಯ ಮೇಲ್ವಿಚಾರಕಿ ಸರಸ್ವತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾರ್ಯಕರ್ತೆಯರಾದ ಶೀಲಾ, ಮಾಧವಿ, ಜಯರಾಮ್, ಜಯಮ್ಮ, ಗೌರಮ್ಮ ಇತರರಿದ್ದರು.