ಬಂಡೀಪುರ: ಹಗಲು ಸಂಚಾರ ನಿರ್ಬಂಧಿಸದಂತೆ ಒತ್ತಾಯ
Team Udayavani, Sep 6, 2019, 1:03 PM IST
ತಾಲೂಕು ಕಚೇರಿ ಮುಂಭಾಗದಲ್ಲಿ ಬಂಡೀಪುರದಲ್ಲಿ ಹಗಲು ಸಂಚಾರ ನಿರ್ಬಂಧಿಸದಂತೆ ಒತ್ತಾಯಿಸಿ ಎಪಿಎಂಸಿ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀ ಯ ಉದ್ಯಾನವನದ ವ್ಯಾಪ್ತಿಯಲ್ಲಿ ಹಾದು ಹೋಗಿ ರುವ ತಮಿಳುನಾಡು ಮತ್ತು ಕೇರಳದ ಹೆದ್ದಾರಿ ಯಲ್ಲಿ ಹಗಲು ಸಂಚಾರವನ್ನು ನಿರ್ಬಂಧಿಸದಂತೆ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಕೂಲಿ ಕಾರ್ಮಿಕರು ಮತ್ತು ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರವಲಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡು ಕೂಲಿ ಕಾರ್ಮಿಕರ ಮುಖಂಡ ಚೇತನ್ ಮಾತ ನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ವನ್ಯಪ್ರಾಣಿಗಳ ಹಿತಾದೃಷ್ಟಿಯಿಂದ ಈಗಾಗಲೇ ರಾತ್ರಿ 9 ರಿಂದ ಮುಂಜಾನೆ 6 ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದರು.
ಪರ್ಯಾಯ ರಸ್ತೆ ಮೂಲಕ ಸಂಚಾರ: ಈಗಾಗಲೇ ಕೇರಳ ಸರ್ಕಾರ ರಾತ್ರಿ ನಿರ್ಬಂಧವನ್ನು ರದ್ದುಗೊಳಿ ಸುವಂತೆ ಒತ್ತಾಯಿಸಿ ನ್ಯಾಯಾಲಯ ದಲ್ಲಿ ಮನವಿ ಮಾಡಿದೆ. ಇದನ್ನು ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ವನ್ಯಜೀವಿಗಳ ಓಡಾಟಕ್ಕೆ ತೊಂದರೆ ಯಾಗುತ್ತಿದ್ದರೆ ಹಗಲು ಸಂಚಾರವನ್ನು ಬಂದ್ ಮಾಡಬಹುದು. ಈ ನಿಟ್ಟಿನಲ್ಲಿ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ಮಾಡಲಿ ಎಂಬ ಅಭಿ ಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ವ್ಯಾಪಾರಸ್ಥರಿಗೆ ತೀವ್ರ ತೊಂದರೆ: ಈ ರೀತಿ ಆದೇಶವನ್ನು ನ್ಯಾಯಾಲಯ ಹೊರಡಿಸಿ ರಾಷ್ಟ್ರೀ ಯ ಹೆದ್ದಾರಿಯನ್ನು ಬಂದ್ ಮಾಡಿಸಿದರೆ ಕೇರಳ ಮತ್ತು ತಮಿಳುನಾಡಿಗೆ ಪಟ್ಟಣದಿಂದ ಹಣ್ಣು- ತರಕಾರಿಗಳು ಸಾಗಣೆಯಾಗುತ್ತಿದೆ. ಇದರಿಂದ ಸಂಪೂರ್ಣವಾಗಿ ಮಾರುಕಟ್ಟೆಯ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆ ಯಾಗುತ್ತದೆ ಎಂದು ದೂರಿದರು.
ತಹಶೀಲ್ದಾರ್ಗೆ ಮನವಿ: ಕೂಲಿ ಕಾರ್ಮಿಕರ ಮತ್ತು ವ್ಯಾಪಾರಸ್ಥರ ಹಿತದೃಷ್ಟಿಯಿಂದ ಹಾಲಿ ಇರುವ ಹಾಗೆಯೇ ಯಥಾಸ್ಥಿತಿಯನ್ನು ಕಾಪಾಡಿ ಕೊಳ್ಳಲು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕು ಎಂಬ ಮನವಿಯನ್ನು ಉಪ ತಹಶೀಲ್ದಾರ್ ಕಮಲಮ್ಮ ಅವರಿಗೆ ಕೂಲಿ ಕಾರ್ಮಿಕರು ಮತ್ತು ವ್ಯಾಪಾರಸ್ಥರು ಸಲ್ಲಿಸಿದರು.
ಮುಖಂಡರಾದ ಅಜರ್ಪಾಷಾ, ಮಹದೇವ ನಾಯ್ಕ, ಬಸವರಾಜನಾಯ್ಕ, ಶಶಿ, ಲೋಕೇಶ್, ಸುರೇಶ್, ಗಣೇಶ್, ಮಣಿ, ಶಿವು, ಅರುಣ್, ಶಬರಿ, ಗೋಪಾಲ, ಸುನಿಲ್ ಸೇರಿದಂತೆ ಇತರರು ಇದ್ದರು.