ಬನ್ನಿಸಾರಿಗೆ, ಶಿವಕಳ್ಳಿ ಬಳಿ ಚಿರತೆ ಪ್ರತ್ಯಕ್ಷ
Team Udayavani, Jun 17, 2020, 5:24 AM IST
ಯಳಂದೂರು: ತಾಲೂಕಿನ ಬನ್ನಿಸಾರಿಗೆ, ಶಿವಕಳ್ಳಿ, ಟಿ.ಹೊಸೂರು ಸುತ್ತಮುತ್ತ ಕಳೆದ ಒಂದು ವಾರದಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ರೈತರು ಕೃಷಿ ಕೆಲಸಗಳಿಗೆ ತೆರಳಲು ಭಯಪಡುತ್ತಿದ್ದಾರೆ.
ಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಶಿವಕಳ್ಳಿ ಸೋಮಣ್ಣ ಜಮೀನಿನಲ್ಲಿ ಬೋನು ಇರಿಸಿದ್ದಾರೆ. ಆದರೆ, ಇದರ ಸುತ್ತ ಚಿರತೆ ಓಡಾಡಿದರೂ ಬೋನಿಗೆ ಬಿದ್ದಿಲ್ಲ. ಇದರಿಂದ ಗ್ರಾಮದ ರೈತರು ಮತ್ತಷ್ಟು ಆತಂಕಕ್ಕೆ ಒಳಾಗಿದ್ದಾರೆ. ಅರಣ್ಯ ಗಡಿಯಲ್ಲಿರುವ ಜಮೀನುಗಳಲ್ಲಿ ಆನೆ, ಚಿರತೆ, ಕಾಡೆಮ್ಮೆ, ಕಾಡುಹಂದಿಗಳೂ ಬೆಳೆ ನಾಶ ಮಾಡುತ್ತಿವೆ.
ಈಗ ಚಿರತೆ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲೇ ರೈತರು ಬೆಳೆಗಳಿಗೆ ನೀರು ಹಾಯಿಸಬೇಕಿದೆ. ಕೆಲವರು ಹಸುಕರು ತೋಟದ ಮನೆಯಲ್ಲೇ ಕಟ್ಟುತ್ತಾರೆ. ಜನ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುವ ಆತಂಕವಿದೆ. ಆದಷ್ಟು ಬೇಗ ಚಿರತೆ ಹಿಡಿದು ಕಾಡಿಗೆ ಬಿಡಬೇಕು ಎಂದು ರೈತರಾದ ಮಹಾದೇವಸ್ವಾಮಿ, ಸೋಮಣ್ಣ ಇತರರು ಆಗ್ರಹಿಸಿದ್ದಾರೆ.