ಚಾಮರಾಜನಗರ: ಪೊಲೀಸ್ ಜೀಪ್ ಕಂಡು ಓಡಿದ ಯುವಕ ಕುಸಿದುಬಿದ್ದು ಸಾವು
Team Udayavani, Jul 27, 2020, 11:21 AM IST
ಚಾಮರಾಜನಗರ: ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪನ್ನು ಕಂಡು ಹೆದರಿ ಓಡಿದ ಯುವಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಯಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಂಕರ (25) ಮೃತ ಯುವಕ. ಈತ ಜೀವನ ನಿರ್ವಹಣೆಗೆ ಅಡುಗೆ ಕೆಲಸ ಮಾಡಿಕೊಂಡಿದ್ದ.
ಘಟನೆಯ ವಿವರ: ಭಾನುವಾರ ಸಂಜೆ 6.30ರ ಸುಮಾರಿನಲ್ಲಿ ಕುದೇರು ಪೊಲೀಸರು ಲಾಕ್ ಡೌನ್ ಕಾರಣ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದರು. ಗುಂಪು ಕೂಡಬೇಡಿ, ಮಾಸ್ಕ್ ಧರಿಸಿ ಎಂದು ಮೈಕಿನಲ್ಲಿ ಹೇಳುತ್ತಾ ಹೋಗುತ್ತಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ಯುವಕರು ಪೊಲೀಸರನ್ನು ಕಂಡೊಡನೆ ಓಡಿಹೋಗಿದ್ದಾರೆ. ಹೀಗೆ ಓಡಿ ಹೋದ ಶಂಕರ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ಆತನನ್ನು ಸಮೀಪದ ಸಂತೆಮರಹಳ್ಳಿ ಖಾಸಗಿ ಆಸ್ಪತ್ರೆ ಗೆ ಕರೆತಂದು, ಬಳಿಕ ಚಾಮರಾಜನಗರ ಸರ್ಕಾರಿ ಆಸ್ಪತ್ರೆ ಗೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಿದರೂ, ಸ್ಪಂದಿಸದೇ ಮೃತಪಟ್ಟಿದ್ದಾನೆ.