ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಿ
Team Udayavani, Jun 19, 2020, 4:39 AM IST
ಚಾಮರಾಜನಗರ: ಜಿಲ್ಲೆಯಲ್ಲಿಪ್ರಗತಿಯಲ್ಲಿರುವ ಎಲ್ಲ ವರ್ಗದ ಸಮು ದಾಯ ಭವನಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ವ್ಯಾಪ್ತಿಯ ಸಮುದಾಯ ಭವನಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಡಾ.ಅಂಬೇಡ್ಕರ್ ಸಮುದಾಯ ಭವನ, ಜಗಜೀವನ್ ರಾಮ್ ಭವನ, ವಾಲ್ಮೀಕಿ ಸಮುದಾಯ ಭವನ, ಕನಕ ಭವನ, ಉಪ್ಪಾರ ಭವನ, ಬಸವ ಭವನ ಸೇರಿದಂತೆ ಇತರೆ ಸಮುದಾಯ ಭವನಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ಕೈಕೊಳ್ಳಬೇಕು ಎಂದರು. ಕಾಮಗಾರಿ ವಿಳಂಬ ವಿಷಯದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಬೇಕು.
ಕಾಮಗಾರಿ ಗುಣಮಟ್ಟದಿಂದ ಇರಬೇಕು. ನಿರ್ಮಾಣದ ಜವಾಬ್ದಾರಿ ನಿರ್ವಹಿಸುತ್ತಿರುವ ಏಜೆನ್ಸಿಗಳು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ನಿಗಾವಹಿಸ ಬೇಕು. ಪೂರ್ಣಗೊಂಡಿರುವ ಭವನಗಳು ಮಾರ್ಗಸೂಚಿಯನ್ವಯ ಹಸ್ತಾಂತರ ಪ್ರಕ್ರಿಯೆ ಆಗಬೇಕು ಎಂದು ನಿರ್ದೇಶನ ನೀಡಿದರು. ಸಮುದಾಯ ಭವನಗಳಿಗೆ ನಿವೇಶನ ಪಡೆದುಕೊಳ್ಳಲು ಅಗತ್ಯ ಪ್ರಕ್ರಿಯೆ ಆರಂಭಿಸಬೇಕು. ಆಯಾ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಸಮುದಾಯ ಭವನಗಳ ನಿರ್ಮಾಣದ ಪ್ರಗತಿ ಪರಿಶೀಲಿಸಬೇಕು.
ನಿವೇಶನ ಸಮಸ್ಯೆ ತೊಡಕುಗಳನ್ನು ತುರ್ತಾಗಿ ಪರಿಹರಿಸಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್ ಕೆ. ಕುನಾಲ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರವಿಕುಮಾರ್, ಅಲ್ಪಸಂಖ್ಯಾಂತರ ಇಲಾಖೆ ಉಪ ನಿರ್ದೇಶಕ ರಾಜೇಂದ್ರಪ್ರಸಾದ್, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.