ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
Team Udayavani, Jun 21, 2020, 5:11 AM IST
ಕೊಳ್ಳೇಗಾಲ: ತಾಲೂಕಿನ ಸರಗೂರು ಕಾವೇರಿ ನದಿ ದಡದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಈಶ್ವರಪ್ಪ ಪರಿಶೀಲಿಸಿದರು. ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಅರಣ್ಯಾಧಿಕಾರಿಗಳು ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ನೀಡಿದ ಮಾಹಿತಿಗೆ ಅಸಮಧಾನ ವ್ಯಕ್ತ ಪಡಿಸಿದ ಸಚಿವರು, ಇಂತಹ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸಬೇಕಾಗಿತ್ತು. ಅರಣ್ಯ ಸಚಿವರೊಂ ದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಹನೂರು ತಾಲೂಕಿನ 98 ಹಳ್ಳಿಗಳಿಗೆ ಮೊದಲ ಹಂತದಲ್ಲಿ ನೀರು ಪೂರೈಸಲಾಗುವುದು, 2ನೇ ಹಂತದಲ್ಲಿ 191 ಹಳ್ಳಿಗೆ ನೀರು ಪೂರೈಸಲು ಅವಕಾಶ ಕಲ್ಪಿಸಿಕೊಡಬೇ ಕೆಂದು ಶಾಸಕ ನರೇಂದ್ರ ಮನವಿ ಮಾಡಿದರು.
ಈ ವೇಳೆ ಶಾಸಕರಾದ ನರೇಂದ್ರ, ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ್ರಾವ್, ಉಪ ವಿಭಾಗಾಧಿಕಾರಿ ನಿಖೀತಾ, ತಹಶೀಲ್ದಾರ್ ಕುನಾಲ್, ತಾಲೂಕು ಪಂಚಾಯಿತಿ ಇಒ ಪ್ರಕಾಶ್ ಇತರರಿದ್ದರು.