ಕಾಂಗ್ರೆಸ್ಗೆ 120 ಸ್ಥಾನ: ಸಂಸದ ಧ್ರುವನಾರಾಯಣ
Team Udayavani, May 13, 2018, 1:04 PM IST
ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದ್ದು, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಕ್ಷೇತ್ರಗಳು ಸೇರಿದಂತೆ 115 ರಿಂದ 120 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಕ್ಷೇತ್ರದ ಸಂಸದ ಆರ್. ಧ್ರುವನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಗ್ರಾಮ ಹೆಗ್ಗವಾಡಿಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳ ಕಾಂಗ್ರೆಸ್ ಸರ್ಕಾರದ ಸಾಧನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಮತ್ತು ಕಳಂಕರಹಿತ ಸುಭದ್ರ ಆಡಳಿತದಿಂದಾಗಿ ರಾಜ್ಯದ ಜನರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಪ್ರಚಾರ ಸಂದರ್ಭದಲ್ಲಿಯೂ ಕಾರ್ಯಕರ್ತರು ಹಾಗೂ ಜನರಲ್ಲಿ ಹೆಚ್ಚಿನ ಹುಮ್ಮಸು ಹಾಗೂ ಪೋ›ತ್ಸಾಹ ಇತ್ತು. ಹೀಗಾಗಿ ಮೇ 15ರ ಫಲಿತಾಂಶವೂ ಕಾಂಗ್ರೆಸ್ ಪರವಾಗಿ ಬರಲಿದೆ ಎಂದು ಹೇಳಿದರು.
ಗುಂಡ್ಲುಪೇಟೆ ಕ್ಷೇತ್ರದ ಅಭ್ಯರ್ಥಿ ಡಾ.ಮೋಹನಕುಮಾರಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ದಿ.ಎಚ್.ಎಸ್.ಮಹದೇವಪ್ರಸಾದ್ ಅವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾರ್ಯಗತಗೊಳಿಸಿದ್ದಾರೆ. ಕಾರ್ಯಕರ್ತರು ಹಾಗು ಮುಖಂಡರ ಸಂಘಟಿತ ಪರಿಶ್ರಮದಿಂದ ಕಾಂಗ್ರೆಸ್ ಪಕ್ಷಕ್ಕೆ ಜಯ ದೊರಕಲಿದೆ ಎಂದು ತಿಳಿಸಿದರು.
ಕಳೆದ ಬಾರಿ ಜಿಲ್ಲೆಯಲ್ಲಿ 4ಕ್ಕೆ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಿತ್ತು. ಹಾಗೆಯೇ ಈ ಬಾರಿಯೂ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಿ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಲಿದೆ ಎಂದು ಹೇಳಿದರು. ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ತಾಪಂ ಸದಸ್ಯ ರೇವಣ್ಣ, ಗ್ರಾಪಂ ಸದಸ್ಯ ನಂದೀಶ್, ಮುಖಂಡರಾದ ದೊರೆಸ್ವಾಮಿ, ರವಿಕುಮಾರ್ ಇದ್ದರು.