ಬೆಳೆ ಸಮೀಕ್ಷೆ ಆ್ಯಪ್ ರೈತರಿಗೆ ವರದಾನ
Team Udayavani, Aug 24, 2020, 1:04 PM IST
ಸಾಂದರ್ಭಿಕ ಚಿತ್ರ
ಯಳಂದೂರು: ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಬಗ್ಗೆ ತಮ್ಮ ತಮ್ಮ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್ನಲ್ಲಿ ಸ್ವತಃ ತಾವೇ ವಿವರ ನಮೂದಿಸುವ ನೂತನ ತಂತ್ರಜ್ಞಾನವನ್ನು ಕೃಷಿ ಇಲಾಖೆ ರೈತರಿಗೆ ಪರಿಚಯಿಸಿದ್ದು, ರಾಜ್ಯದಲ್ಲಿ ಈ ಆ್ಯಪ್ ಕಾರ್ಯಾರಂಭ ಮಾಡಿದೆ.
ರೈತರಿಗೆ ವರದಾನ: ರೈತರು ಬೆಳೆಯುವ ಬೆಳೆಗಳ ಬಗ್ಗೆ ನಿಖರ ಮಾಹಿತಿ ಪಡೆಯುವ ಉದ್ದೇಶದಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ಜಮೀನಿನ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ನಲ್ಲಿ ತಾವೇ ಬೆಳೆ ಸಮೀಕ್ಷೆ ಮಾಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಇದೇ ಮೊದಲ ಬಾರಿಗೆ ಪರಿಚಯಿಸಿದ್ದು, ರೈತರಿಗೆ ವರದಾನವಾಗಲಿದೆ ಎಂದು ಭಾವಿಸಲಾಗಿದೆ. ವಿಮೆ ಪಡೆಯಲು ಸಹಕಾರಿ: ಈ ಹಿಂದೆ ನಡೆಯುತ್ತಿದ ಸಮೀಕ್ಷೆಯ ನಿಖರವಾದ ಮಾಹಿತಿ ಇಲಾಖೆ ಬಳಿ ಲಭ್ಯವಿರಲ್ಲಿಲ್ಲ. ಹತ್ತಾರು ಲೋಪ ದೋಷ ಗಳಿದ್ದವು. ಆ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭದಲ್ಲಿ ಯಾವ ಬೆಳೆ ಹೆಚ್ಚು ನಾಶವಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾ ಗು ತ್ತಿರಲಿಲ್ಲ. ಹೊಸ ತಂತ್ರಜ್ಞಾನ ಇದಕ್ಕೆ ತಿಲಾಂಜಲಿ ನೀಡಲಿದ್ದು, ರೈತರಿಗೆ ಸುಲಭವಾಗಿ ಬೆಳೆ ವಿಮೆ ಪಡೆಯಲು ಇದು ಸಹಕಾರಿಯಾಗಲಿದೆ.
ಯಳಂದೂರು ತಾಲೂಕು 8000 ಹೆಕ್ಟೇರ್ ಸಾಗುವಳಿ ಭೂಮಿಯನ್ನು ಹೊಂದಿದೆ. 2000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾ ರಿಕೆ ಬೆಳೆಗಳಾದ ತೆಂಗು, ಬಾಳೆ, ಹೂವು, ತರಕಾರಿ ಇತರೆ ಬೆಳೆ ಬೆಳೆದರೆ, 6000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಭತ್ತ, ರಾಗಿ, ಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಹಿಂದಿನ ಸಮೀಕ್ಷೆ ಎಡವಟ್ಟು: ಈ ಹಿಂದೆ ಮುಸುಕಿನ ಜೋಳ ಬೆಳೆದ ಪ್ರತಿಯೊಬ್ಬ ರೈತರಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಸರ್ಕಾರ ಮೇ ತಿಂಗಳಲ್ಲಿ ಘೋಷಣೆ ಮಾಡಿದೆ. ತಾಲೂಕಿನ 2000ಕ್ಕೂ ಹೆಚ್ಚಿನ ರೈತರು ಇದಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪ್ರಕಾರ ಪಹಣಿ ಪತ್ರದಲ್ಲಿ ನೋಂದಣಿಯಾಗಿರುವ ತಾಲೂಕಿನ 448 ಜನ ರೈತರಿಗೆ ಜೋಳದ ಪರಿಹಾರ ಹಣವು ಪಾವತಿಯಾಗಿದೆ. ಇದರಿಂದ ಪಹಣಿ ಪತ್ರದಲ್ಲಿ ದೃಢೀಕರಿಸದೆ ಉಳಿದಿರುವ ರೈತರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಪಾವತಿಯಾಗಿರಲಿಲ್ಲ.