ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ರೆ ಅಭಿವೃದ್ಧಿ: ಶಾಸಕ ಪುಟ್ಟರಂಗಶೆಟ್ಟಿ
ಯೋಜನೆಗಳನ್ನು ಅನುಷ್ಠಾನ ಮಾಡುವ ಮಹತ್ತರ ಹೊಣೆಗಾರಿಕೆ ಕಾರ್ಯಾಂಗದ ಮೇಲಿದೆ.
Team Udayavani, Apr 22, 2022, 6:09 PM IST
ಚಾಮರಾಜನಗರ: ಕಾರ್ಯಾಂಗದ ಪ್ರಮುಖ ಭಾಗವಾಗಿರುವ ಅಧಿಕಾರಿ ನೌಕರರ ವರ್ಗದ ಪರಿಣಾಮಕಾರಿ ಹಾಗೂ ಪ್ರಾಮಾಣಿಕ ಕಾರ್ಯ ನಿರ್ವಹಣೆಯಿಂದ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್ ಪಟೇಲ್ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಶಾಸಕಾಂಗ ರೂಪಿಸುವ ಶಾಸನಗಳು, ಕಾರ್ಯಕ್ರಮಗಳು, ಯೋಜನೆಗಳನ್ನು ಅನುಷ್ಠಾನ ಮಾಡುವ ಮಹತ್ತರ ಹೊಣೆಗಾರಿಕೆ ಕಾರ್ಯಾಂಗದ ಮೇಲಿದೆ. ಸರ್ಕಾರಿ ಅಧಿಕಾರಿ ನೌಕರರು ನಿಷ್ಠೆ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿದರೆ ಅಭಿವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರ ಅಧಿಕಾರಿ ನೌಕರರದ್ದಾಗಿದೆ ಎಂದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಚುಡಾ ಅಧ್ಯಕ್ಷ ಪಿ.ಬಿ.
ಶಾಂತಮೂರ್ತಿ ಕುಲಗಾಣ ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಡೀಸಿ ಎಸ್. ಕಾತ್ಯಾಯಿನಿದೇವಿ ಮಾತನಾಡಿದರು. ಡಯಟ್ ಹಿರಿಯ ಉಪನ್ಯಾಸಕ ಯು.ಆರ್. ಲಿಂಗರಾಜೇಅರಸ್ ಮುಖ್ಯ ಭಾಷಣ ಮಾಡಿದರು.
ಜಿಪಂ ಲೆಕ್ಕಾಧಿಕಾರಿ ಎಚ್.ಎಸ್. ಗಂಗಾಧರ್ ಅವರು, ಪ್ರಶಸ್ತಿ ಪುರಸ್ಕಾರದೊಂದಿಗೆ ತಮಗೆ ನೀಡಲಾಗಿರುವ 25 ಸಾವಿರ ರೂ. ನಗದನ್ನು ಬಡ ವಿದ್ಯಾರ್ಥಿಗಳ ನೆರವಿಗೆ ಹಾಗೂ ಸರ್ಕಾರಿ ನೌಕರರ ಸಂಘದ ಚಟುವಟಿಕೆಗಳಿಗೆ ನೀಡುವುದಾಗಿ ತಿಳಿಸಿದರು. ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ, ಎಎಸ್ಪಿ ಸುಂದರ್ ರಾಜ್, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳಾದ ಎಸ್. ಮಹದೇವಸ್ವಾಮಿ, ಎಸ್. ಮಹಾದೇವಯ್ಯ, ಮಲ್ಲಿಕಾರ್ಜುನ್ ಕುಂಟೋಜಿ, ಜೋಸೆಫ್ ಅಲೆಕ್ಸಾಂಡರ್ ಇದ್ದರು.