ಪಡಿತರ ಪಡೆಯಲು ಹೆಬ್ಬೆಟ್ಟು ಬೇಡ, ಮೊದಲಿನಂತೆಯೇ ವಿತರಿಸಿ
Team Udayavani, Aug 27, 2021, 5:29 PM IST
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ದಿನಗೂಲಿ ನೌಕರರನ್ನು ವರ್ಗಾವಣೆ ಮಾಡಿರುವ ಸಿಎಫ್ ನಟೇಶ್ ನಡೆ ಖಂಡಿಸಿ ಅರಣ್ಯ ಸಚಿವ ಉಮೇಶ್ ಕತ್ತಿ ಮುಂದೆ ಆದಿವಾಸಿ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ಮೇಲುಕಾಮನಹಳ್ಳಿ ಹಾಡಿಗೆ ಗಿರಿಜನರ ಸಮಸ್ಯೆ ಆಲಿಸಲು ಸಚಿವರು ಭೇಟಿ ನೀಡಿದ ವೇಳೆ ಅಳಲು ತೋಡಿಕೊಂಡ ಮಹಿಳೆಯರು,ವರ್ಗಾವಣೆ ಮಾಡಿದರೆ 12 ಸಾವಿರ ಸಂಬಳದಲ್ಲಿ ಕುಟುಂಬವನ್ನು ಬಿಟ್ಟು ಹೇಗೆ ಬದುಕುವುದು? ಮನೆಯಲ್ಲಿ ಆರೋಗ್ಯ ಸರಿ ಇಲ್ಲದವರು ಇದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು.
ಗಿರಿಜನರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಸಿಗುತ್ತಿದೆಯಾ? ಪಡಿತರದಲ್ಲಿ ಏನು ಕೊಡುತ್ತಿದ್ದಾರೆ ಎಂದು ಸಚಿವರು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲಮಹಿಳೆಯರು ಪಡಿತರ ಪಡೆಯುವುದಕ್ಕೆ ಹೆಬ್ಬೆರಳಿನ ಗುರುತು ನೀಡಲು ಕೆಲಸ ಕಾರ್ಯ ಬಿಟ್ಟು ಕಾಯಬೇಕಿದೆ. ಇದನ್ನು ರದ್ದು ಪಡಿಸಿ ಮೊದಲಿನಂತೆ ನೀಡಿ ಎಂದು ಮನವಿ ಮಾಡಿದರು.
ಕೆಲ ಪಡಿತರ ಕಾರ್ಡ್ಗಳಿಗೆ ಆಧಾರ್ ಲಿಂಕ್ ಆಗದೆ ಹೆಸರು ಬಿಟ್ಟು ಹೋಗಿದೆ. ನಾಡ ಕಚೇರಿಗೆ ಹೋದರೆ ಶೀಘ್ರ ಮಾಡಿಕೊಡುವುದಿಲ್ಲ. ಇದರಿಂದಾಗಿ ಕೂಲಿ ಬಿಟ್ಟು ಅಲೆದಾಡಬೇಕಿದೆ ಎಂದು ಸಚಿವರ ಬಳಿ ತಿಳಿಸಿದಾಗ ಗಿರಿಜನರು ಇರುವ ಜಾಗದಲ್ಲಿ ಕ್ಯಾಂಪ್ ಮಾಡಿ ಆಧಾರ್ ಸಮಸ್ಯೆ ಸರಿಪಡಿಸಿ ಎಂದು ತಹಶೀಲ್ದಾರ್ಗೆ ಸೂಚಿಸಿದರು.
ಇದನ್ನೂ ಓದಿ:ಬಿಗ್ ಬಿ ಬಾಡಿಗಾರ್ಡ್ಗೆ ಸಿಇಒಗಳ ಸಂಬಳಕ್ಕಿಂತ ಹೆಚ್ಚು ಆದಾಯ : ವರದಿ ಬೆನ್ನಲ್ಲೆ ವರ್ಗಾವಣೆ
ಗಿರಿಜನರಿಗೆ ಹಿಂದೆ ಬೆಟ್ಟ ಕುರುಬ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರು. ಇದೀಗ ಕಾಡು ಕುರುಬ ಎಂದು ನೀಡುತ್ತಿದ್ದಾರೆ. ಇದರಿಂದಾಗಿ ಶಾಲೆ ಹಾಗೂ ಬ್ಯಾಂಕ್ಗಳಲ್ಲಿ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸಿ ಎಂದು ಗಿರಿಜನ ರು ಮನವಿ ಮಾಡಿದರು.
ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಪಿಸಿಸಿಎಫ್ ಹೀರಾಲಾಲ್, ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ , ಪಿಕಾರ್ಡ್
ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ನಿರ್ದೇಶಕ ಚನ್ನಮಲ್ಲೀಪುರ ಬಸವಣ್ಣ, ತಾಪಂ ಮಾಜಿ ಸದಸ್ಯ ಸಿ.ಮಹದೇವ ಪ್ರಸಾದ್, ಮುಖಂಡರಾದ ಮಾಡ್ರಹಳ್ಳಿ ನಾಗೇಂದ್ರ,ಮಲ್ಲೇಶ್, ಮಹೇಂದ್ರ, ರಾಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೆಲಸ ಮುಗಿಸದಿದ್ದರೆ ಅಮಾನತು: ಸಚಿವ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಾಣ ಮಾಡಿರುವ ಮನೆಗಳ ಕಳಪೆ ಗುಣಮಟ್ಟದಿಂದ ಕೂಡಿದೆ, ಶೌಚಾಲಯಗಳನ್ನು ಸರಿಯಾದ ಕ್ರಮದಲ್ಲಿ ಮಾಡಿಲ್ಲ, ಕೆಲಸ ಮುಗಿಸುವ ಭರದಲ್ಲಿ ಹಾಗೆ ಬಿಟ್ಟಿದ್ದಾರೆ ಎಂದು ಮಹಿಳೆಯರು ದೂರಿದರು. ಈ ವೇಳೆ ಸಚಿವರು ಸಮಾಜ
ಕಲ್ಯಾಣಇ ಲಾಖೆಯ ಉಪನಿರ್ದೇಶಕರನ್ನು ಕರೆದು ಶೀಘ್ರವಾಗಿ ಕೆಲಸ ಮಾಡಿಸಬೇಕು. ಇಲ್ಲವಾದಲ್ಲಿ ನಿನ್ನ ಅಮಾನತು ಮಾಡಿಸುವೆ ಎಂದು ಎಚ್ಚರಿಕೆ ನೀಡಿದರು.