ಬೆಳೆ ವಿಮಾ ಮೊತ್ತ ಪಾವತಿ ಅವಧಿ ವಿಸ್ತರಿಸಿ
Team Udayavani, Jul 2, 2020, 5:06 AM IST
ಯಳಂದೂರು: ಬೆಳೆ ವಿಮಾ ಮೊತ್ತ ಪಾವತಿಗೆ ಅವಧಿ ವಿಸ್ತರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಉದ್ದು, ಹೆಸರು, ಈರುಳ್ಳಿ ಹಾಗೂ ಎಳ್ಳು ಬೆಳೆಗಳಿಗೆ ರೈತರಿಗೆ ಬೆಳೆ ವಿಮೆ ಕಟ್ಟಲು ಜೂ.29ರಂದು ಕೃಷಿ ಇಲಾಖೆ ಸೂಚನೆ ನೀಡಲಾಗಿದೆ. ಇದಕ್ಕೆ ಜೂ.30 ಅಂತಿಮ ದಿನಾಂಕವೆಂದು ನಿಗದಿ ಮಾಡಲಾಗಿದೆ. ಕೇವಲ 2 ದಿನದ ಅವಧಿಯಲ್ಲಿ ಕೋವಿಡ್ 19 ಹಿನ್ನೆಲೆಯಲ್ಲಿ ವಿಮೆ ಮೊತ್ತ ಬ್ಯಾಂಕುಗಳಲ್ಲಿ ಪಾವತಿಸಲು ಸಾಧ್ಯವಿಲ್ಲ. ಈ ಬಗ್ಗೆ ವಾರದೊಳಗೆ ದಿನಾಂಕ ವಿಸ್ತರಿಸಲು ಕ್ರಮ ವಹಿಸಬೇಕು.
ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ಉಪತಹಶೀಲ್ದಾರ್ ನಂಜಯ್ಯ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಡಾ. ಗುರುಪ್ರಸಾದ್, ಹೊನ್ನೂರು ಬಸವಣ್ಣ, ಸೋಮಣ್ಣ, ನಾಗಶೆಟ್ಟಿ, ಸುರೇಶ್, ವೃಷಭೇಂದ್ರ, ಅಂಬಳೆ ಶಿವಕುಮಾರ್, ರಂಗಸ್ವಾಮಿ, ಶಾಂತರಾಜು, ಮಹಾದೇವಪ್ಪ, ಶಿವಪ್ರಸಾದ್, ನಾಗರಾಜು, ಮಹದೇವಸ್ವಾಮಿ ರೈತರಿದ್ದರು.