ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗಳು ಸಂಪೂರ್ಣ ಭಸ್ಮ
Team Udayavani, Feb 8, 2019, 7:08 AM IST
ಕೊಳ್ಳೇಗಾಲ: ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕೆಯ ಜ್ವಾಲೆ ಹರಡಿದ್ದರಿಂದ ಅಕ್ಕಪಕ್ಕದ ಮೂರು ಮನೆಗಳಲ್ಲಿ ಕೂಡ ಸಿಲಿಂಡರ್ ಸ್ಫೋಟಗೊಂಡು ಭಸ್ಮವಾಗಿರುವ ಘಟನೆ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ವೆಂಕಟನಾಯಕ ಮನೆಯಲ್ಲಿ ರಾತ್ರಿ ದಿಢೀರನೇ ಸಿಲಿಂಡರ್ ಸ್ಫೋಟಗೊಳ್ಳುತ್ತಿದ್ದಂತೆ ಬೆಂಕಿಯ ಕಿಡಿ ಹರಡಿದ್ದರಿಂದ ನೆರೆಯ ಪುಟ್ಟರಂಗಮ್ಮ, ವೆಂಕಟಮ್ಮ, ಗೋಪಾಲನಾಯಕ ಅವರ ಮನೆಯಲ್ಲಿಯೂ ಇದ್ದ ಸಿಲಿಂಡರ್ ಸ್ಫೋಟ ಗೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಒಟ್ಟು ನಾಲ್ಕು ಮನೆಗಳ ಸಂಪೂರ್ಣವಾಗಿ ಭಸ್ಮವಾಗಿವೆ.
ನಾಲ್ಕು ಹೆಂಚಿನ ಮನೆಗಳು ಸಿಲಿಂಡರ್ ಸ್ಫೋಟಕ್ಕೆ ಉರಿಯುತ್ತಿರುವುದನ್ನು ಕಂಡ ಗ್ರಾಮಸ್ಥರು ದಿಢೀರ್ನೇ ಹೊರಬಂದು ಮನೆಯಲ್ಲಿದ್ದ ನೀರನ್ನು ಸಿಂಪಡಿಸುವ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿಯ ಜ್ವಾಲೆ ವ್ಯಾಪಕವಾಗಿ ಹರಡಿತು. ಕೂಡಲೇ ಅಗ್ನಿಶಾಮಕ ದಳ ಧಾವಿಸಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸಕಾಲದಲ್ಲಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಬಂದು ಬೆಂಕಿಯನ್ನು ನಂದಿಸದಿದ್ದರೆ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹೊತ್ತುಕೊಂಡು ಇಡೀ ಗ್ರಾಮಕ್ಕೆ ಬೆಂಕಿ ಬೀಳುವ ಸಂಭವವಿತ್ತು ಎಂದು ಗ್ರಾಮದ ನಿವಾಸಿ ಕೃಷ್ಣ ಆತಂಕ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷೆ ಭೇಟಿ: ಅದೇ ಗ್ರಾಮದ ಜಿಪಂ ಅಧ್ಯಕ್ಷೆ ಶಿವಮ್ಮ ದಿಢೀರನೇ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಸಿಲಿಂಡರ್ ಸ್ಫೋಟದಿಂದ ಮನೆ ಕಳೆದುಕೊಂಡ ಕುಟುಂಬದವರಿಗೆ ಮನೆ ಮತ್ತು ಊಟದ ಸೌಕರ್ಯ ಹಾಗೂ ಪರಿಹಾರ ಕೊಡಿಸಿಕೊಡುವ ಭರವಸೆಯನ್ನು ನೀಡಿದರು.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸೂಚನೆ ಮಾಡಿ, ಮನೆ ಕಳೆದುಕೊಂಡ ಕುಟುಂಬದವರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಎಸಿ ಪರಿಶೀಲನೆ: ತಾಲೂಕಿನ ಪಾಳ್ಯ ಗ್ರಾಮದಲ್ಲಿ 4 ಮನೆಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆ ಭಸ್ಮವಾಗಿರುವ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ನಿಖೀತಾ ಎಂ.ಚಿನ್ನಸ್ವಾಮಿ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಕಳೆದುಕೊಂಡಿರುವ ನಿವಾಸಿಗಳಿಗೆ ಕೂಡಲೇ ವಸತಿ ಸೌಕರ್ಯ ಕಲ್ಪಿಸಿಕೊಡಲಾಗು ವುದು. ಆಹಾರ ಇಲಾಖೆಯಿಂದ ಆಹಾರ ಪದಾರ್ಥ ವಿತರಿಸಲಾಗುವುದು. ಸಿಲಿಂಡರ್ ಕಂಪನಿಯ ವತಿಯಿಂದ ಪರಿಹಾರ ಕಲ್ಪಿಸ ಲಾಗುವುದು ಎಂದು ಉಪವಿಭಾಗಾಧಿಕಾರಿ ನಿಖೀತಾ ಭರವಸೆ ನೀಡಿದರು.