ಕಾಲಿನಿಂದ ಗುದ್ದಿದ್ದಕ್ಕೆ ಗರ್ಭಿಣಿಗೆ ಗರ್ಭಪಾತ
Team Udayavani, Feb 27, 2021, 12:31 PM IST
ಸಾಂದರ್ಭಿಕ ಚಿತ್ರ
ಕೊಳ್ಳೇಗಾಲ: ಪತಿಯ ಮೇಲೆ ಹಲ್ಲೆ ಮಾಡುತ್ತಿದ್ದದ್ದನ್ನು ತಡೆಯಲು ಬಂದ 4 ತಿಂಗಳ ಗರ್ಭಿಣಿಗೆ ಆರೋಪಿಗಳು ಕಾಲಿನಿಂದ ಒದ್ದು ಗರ್ಭಪಾತ ಮಾಡಿರುವ ಅಮಾನವೀಯ ಘಟನೆ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಬೇಳೆ ಮಹದೇವ ಮತ್ತು ಶಿವಣ್ಣ ಎಂಬುವವರು ಗರ್ಭಿಣಿಯಹಾಗೂ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಇಬ್ಬರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಗ್ರಾಮದ ಸೋಮಶೇಖರ್ ಮಹಡಿಯ ಮೇಲೆ ಜಿಮ್ ಮಾಡುತ್ತಿದ್ದರು. ಈ ವೇಳೆ ಅದೇ ಗ್ರಾಮದ ನಿವಾಸಿ ಬೇಳೆ ಮಹದೇವ ಮತ್ತು ಶಿವಣ್ಣ ಎಂಬುವವರು ಮಧ್ಯ ಪ್ರವೇಶಿಸಿ, “ನನ್ನ ಪತ್ನಿಯನ್ನು ಮಹಡಿಯಿಂದ ನೋಡುತ್ತೀಯ’ ಎಂದು ಪ್ರಶ್ನಿಸಿದ್ದರು. ಈ ವೇಳೆ ಇಬ್ಬರ ನಡುವೆ ಜಟಾಪಟಿ ನಡೆದಿದೆ. ಜಗಳವಾಡುವುದನ್ನು ಕಂಡ
ಸೋಮಶೇಖರ್ ಪತ್ನಿ ಮಹದೇವಿ (20) ಬಿಡಿಸಲು ಬಂದ ವೇಳೆ ಆಕೆಯ ಹೊಟ್ಟೆಗೆ ಒದ್ದು ತೀವ್ರ ಗಾಯಗೊಳಿಸಿದ್ದಾರೆ. ನಂತರ ಸೋಮಶೇಖರ ತಾಯಿ ಮಲ್ಲಮ್ಮ (50) ಮೇಲೆ ಕೂಡ ಹಲ್ಲೆ ಮಾಡಿ ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ.
ಸೋಮಶೇಖರ್ ಪತ್ನಿ ಗರ್ಭಪಾತದಲ್ಲಿ ತೀವ್ರ ನೋವುಂಟಾದ ಕಾರಣ ಆಕೆಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಗಾಯಾಳು ಸೋಮಶೇಖರ್ ನೀಡಿದ ದೂರು ದಾಖಲಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಅಶೋಕ್ ಪ್ರಕರಣ ದಾಖಲಿಸಿದ್ದಾರೆ.