ನನ್ನ ನೆರವು ಪಡೆದಿಲ್ಲವೆಂದು ಸಿದ್ದು ಹೇಳಲಿ
Team Udayavani, Mar 27, 2019, 12:59 PM IST
ಚಾಮರಾಜನಗರ: ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ಲಬೇಕಾದರೆ ನನ್ನ ಮನೆ ಬಳಿ ಬಂದು ನಿಂತಿರಲಿಲ್ಲವೇ, ನನ್ನ ಸಹಾಯ ಪಡೆದುಕೊಂಡಿಲ್ಲ ಎಂದು ಬಹಿರಂಗವಾಗಿ ಹೇಳಲಿ. ನಾನು ಸಹ ಮಾತನಾಡುವುದನ್ನು ನಿಲ್ಲಿಸುತ್ತೇನೆ. ಅನಾವಶ್ಯಕವಾಗಿ ನಾನು ಯಾರನ್ನು ಏಕವಚನದಲ್ಲಿ, ತುತ್ಛವಾಗಿ ಮಾತನಾಡುವುದಿಲ್ಲ. ಅದು ನನ್ನ ಜಯಮಾನವು ಅಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಹರಿಹಾಯ್ದರು.
ನಗರದ ತಾಲೂಕು ಕಚೇರಿ ಪಕ್ಷದ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುತ್ತೇನೆ ಎಂದು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ದುರಹಂಕಾರಿ: ದುರಹಂಕಾರದಿಂದಾಗಿ ಸಿದ್ದರಾಮಯ್ಯ ಸೋತಿದ್ದು, ಇಂಥ ವ್ಯಕ್ತಿಯನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಎಲ್ಲರನ್ನು ಏಕ ವಚನದಲ್ಲಿ ಮಾತನಾಡಿಸುವ ಈತನಿಂದ ನಾನು ಪಾಠ ಕಲಿಯಬೇಕಿಲ್ಲ. ಧ್ರುವನಾರಾಯಣ ನನ್ನನ್ನು ಏಕ ವಚನ ಹಾಗೂ ತುತ್ಛವಾಗಿ ಮಾತನಾಡಿದ್ದೀರಿ ಎಂದು ಹೇಳುವ ಮೊದಲು, ನಿಮ್ಮ ನಾಯಕ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಟ್ಟು ಮಾತನಾಡಲು ತಿಳಿಸಿ ಎಂದರು.
ಕನಿಷ್ಠ ತಿಳಿವಳಿಕೆ ಇರಲಿ: ಸಂವಿಧಾನ ಬದಲಾವಣೆ ಮಾಡಲು ಅದು ಮಗ್ಗಿ ಪುಸ್ತಕವೇ? ಪಠ್ಯ ಪುಸಕ್ತವನ್ನೇ ಬದಲಾವಣೆ ಮಾಡುವುದು ಕಷ್ಟ. ಇನ್ನು ಪ್ರಜಾಪ್ರಭುತ್ವದ ಭದ್ರ ಬುನಾದಿಯಾದ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಕನಿಷ್ಠ ತಿಳಿವಳಿಕೆಯೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇಲ್ಲವೇ? ವಕೀಲರಾಗಿರುವ ಸಿದ್ದರಾಮಯ್ಯ ಸಹ ಸಂವಿಧಾನ ಬದಲಾಯಿಸುತ್ತಾರೆ ಎಂದು ಪ್ರತಿ ಚುನಾವಣೆಯಲ್ಲಿ ದಲಿತ ಮತ ಪಡೆದುಕೊಳ್ಳಲು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ಉತ್ಕೃಷ್ಟ ಸಂವಿಧಾನ ದೇಶಕ್ಕೆ ಮಾದರಿ: ಗುಜರಾತ್ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಪ್ರಥಮ ಬಾರಿ ಸಂಸತ್ ಪ್ರವೇಶ ಮಾಡಿ, ಪ್ರಧಾನಿಯಾದರು. ಅವರೇ ಸಹ ಸಂಸತ್ ಹೆಬ್ಟಾಗಿಲಿನಲ್ಲಿ ನಮಸ್ಕಾರ ಮಾಡಿ, ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದಾಗಿ ನಾನು ಪ್ರಧಾನಿಯಾಗಲು ಸಾಧ್ಯವಾಯಿತು. ಇಂಥ ಉತ್ಕೃಷ್ಟ ಸಂವಿಧಾನ ದೇಶಕ್ಕೆ ಮಾದರಿಯಾಗಿದೆ ಎಂದರು.
ಅಭಿವೃದ್ಧಿ ಮಾಡುವಲ್ಲಿ ಕಾಂಗ್ರೆಸ್ ವಿಫಲ: ಇಂಥ ಸುಳ್ಳು ಮಾತಿಗಳಿಗೆ ಬೆಲೆ ಕೊಡಬೇಡಿ. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ಇದೆ. 60 ವರ್ಷಗಳ ಕಾಲ ಆಡಳಿತ ಕಾಂಗ್ರೆಸ್ ದೇಶದ ಅಭಿವೃದ್ಧಿಯನ್ನು ಮಾಡುವಲ್ಲಿ ವಿಫಲವಾಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ವಿದೇಶ ಪ್ರವಾಸ ಮಾಡುವ ದೇಶಕ್ಕೆ ಹೆಚ್ಚಿನ ಬಂಡಾವಾಳ ಬರುವಂತೆ ನೋಡಿಕೊಂಡಿದರು. ಮತ್ತೂಮ್ಮೆ ಅವರು ಪ್ರಧಾನಿಯಾಗಬೇಕು. ದೇಶದ ಜನರು ಸಹ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಎಂದರು.
ರಾಜ್ಯ ಕಾರ್ಯದರ್ಶಿ ರಾಜೇಂದ್ರನ್, ವಿಧಾನಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಶಾಸಕ ಸಿ.ಎನ್.ನಿರಂಜನ್ಕುಮಾರ್, ಸಿದ್ದರಾಜು, ಶಾಸಕ ಹರ್ಷವರ್ಧನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪೊ›.ಕೆ. ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಶಾಸಕರಾದ ಸಿ. ಗುರುಸ್ವಾಮಿ, ಭಾರತಿ ಶಂಕರ್, ಜಿ.ಎನ್. ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಸಿ.ಬಸವೇಗೌಡ, ವೆಂಕಟರಮಣಸ್ವಾಮಿ (ಪಾಪು), ದತ್ತೇಶಕುಮಾರ್, ಹನುಮಂತಶೆಟ್ಟಿ, ರಾಮಚಂದ್ರ, ಕುಂಬ್ರಹಳ್ಳಿ ಸುಬ್ಬಣ್ಣ ಇತರರು ಹಾಜರಿದ್ದರು.
ಶಿವಣ್ಣಗೆ ಸಂಸದನಾಗಲು ಅವಕಾಶ ಮಾಡಿಕೊಟ್ಟೆ: ಶಿವಣ್ಣನಿಗೆ ಒಂದು ಬಾರಿ ಸಂಸದನಾಗಲು ಅವಕಾಶ ಮಾಡಿಕೊಟ್ಟೆ. ಆತ ಏನೂ ಮಾಡಲಿಲ್ಲ. ಉಂಡಾಡಿ ಗುಂಡಾನಂತೆ ತಿರುಗಾಡಿದ. ಒಂದು ಬಟನ್ ಒತ್ತಿ ಕೋಟ್ಯಧೀಶನಾಗಿಬಿಟ್ಟ. ಇಂಥವರು ಎಲ್ಲಿಗೆ ಹೋದರೆ ಏನು ಪ್ರಯೋಜನ? ನಾನು ಮಾತನಾಡುವುದು ಸರಿಯಲ್ಲ ಎಂದರೆ, ನಾನು ನಿಮಗೆ ಸಹಾಯ ಮಾಡಿದ್ದೇ ತಪ್ಪು.
ಅಂದು ಸಂಸದನಾಗಬೇಕಾದರೆ ನನ್ನ ಶ್ರಮ ವಿರಲಿಲ್ಲವೇ ಎಂದು ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು. ನನ್ನ ವಿರುದ್ಧ ಟೀಕೆ ಮಾಡುವ ಪಿಂಜರಾಪೋಲ್ಗಳಿಗೆ ನಾನು ಉತ್ತರ ನೀಡಬೇಕಾದ ಅಗತ್ಯವಿಲ್ಲ. ಬಿ.ರಾಚಯ್ಯನವರ ಬಗ್ಗೆ ನನಗೆ ಅಪಾರ ಗೌರವವಿದೆ. 46 ವರ್ಷಗಳ ರಾಜಕೀಯ ಅನುಭವ ಹೊಂದಿರುವ ನಾನು ಆರೋಗ್ಯವಾಗಿಯೇ ಇದ್ದೇನೆ. ಆದರೆ, ಯುವಕರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಚುನಾವಣೆ ರಾಜಕೀಯದಿಂದ ದೂರವಿದ್ದೆ ಅಷ್ಟೇ ಎಂದು ತಿಳಿಸಿದರು.