ಜನಜೀವನಕ್ಕೆ ತೊಂದರೆ ಇಲ್ಲ, ಬೇಳೆ ಕೊಟ್ಟಿಲ್ಲ!
Team Udayavani, Apr 15, 2020, 4:49 PM IST
ಸಾಂದರ್ಭಿಕ ಚಿತ್ರ
ಚಾಮರಾಜನಗರ: ಕೋವಿಡ್ 19 ಲಾಕ್ಡೌನ್ ನಿಯಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ಪ್ರಕರಣಗಳಿಲ್ಲದಂತೆ ಎಚ್ಚರಿಕೆ ವಹಿಸಿದೆ. ಜತೆಗೆ, ಜನಜೀವನಕ್ಕೆ ಸಮಸ್ಯೆ ಆಗದಂತೆಯೂ ಪಡಿತರ, ದಿನಸಿ ಸಾಮಗ್ರಿ ಖರೀದಿಗೂ ಅಗತ್ಯ ವ್ಯವಸ್ಥೆ ಮಾಡಿದೆ.
ಕೋವಿಡ್ ಆಸ್ಪತ್ರೆ, ಫೀವರ್ ಕ್ಲಿನಿಕ್, ಕ್ವಾರಂ ಟೈನ್ ಕೇಂದ್ರಗಳ ಪರಿಸ್ಥಿತಿ, ದಿನಸಿ, ತರಕಾರಿಕೊಳ್ಳಲು ಜನ ಸಾಮಾನ್ಯರಿಗೆ ಕಲ್ಪಿಸಿರುವ ಅನು ಕೂಲ, ಉಚಿತ ಹಾಲು ವಿತರಣೆ ಇತ್ಯಾದಿಗಳನ್ನು ಕುರಿತ ಫ್ಯಾಕ್ಟ್ ಚೆಕ್ ಇಲ್ಲಿದೆ ಕೆಳಗಿನಂತಿದೆ. ಪಡಿತರ ವಿತರಣೆ: ಬಿಪಿಎಲ್ಗೆ 2 ತಿಂಗಳ ಪಡಿತರ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 2.91 ಲಕ್ಷ ಮಂದಿ ಬಿಪಿಎಲ್ ಪಡಿತರದಾರರಿದ್ದು, ಅವರಿಗೆ 96,980 ಕ್ವಿಂಟಲ್ ಅಕ್ಕಿ, 10 ಕ್ವಿಂಟಲ್ ಗೋಧಿ ವಿತರಣೆ ಮಾಡಲಾಗುತ್ತಿದೆ.
ಬೇಳೆ ಕೊಟ್ಟಿಲ್ಲ: ಅಕ್ಕಿಯೇನೋ ದೊರಕುತ್ತಿದೆ. ಆದರೆ ಸಾಂಬಾರಿಗೆ ತೊಗರಿ ಬೇಳೆ ಅವಶ್ಯಕ, ಬೇಳೆಯನ್ನು ಇನ್ನೂ ನೀಡಿಲ್ಲ ಎಂಬುದು ಪಡಿ ತರದಾರರ ದೂರು. ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಉಪನಿರ್ದೇಶಕ ರಾಚಪ್ಪ, ಸರ್ಕಾರದಿಂದ ತೊಗರಿ ಬೇಳೆ ವಿತರಣೆಗೆ ಸೂಚನೆ ಬಂದಿಲ್ಲ. ತೊಗರಿ ಬೇಳೆಯನ್ನು ಮೇ ನಲ್ಲಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಅಕ್ಕಿ: ಇನ್ನು ಜಿಲ್ಲೆ ಯಲ್ಲಿ 9 ಸಾವಿರ ಮಂದಿ ಎಪಿಎಲ್ ಕಾರ್ಡ್ ದಾರರಿದ್ದಾರೆ. ಇವರಲ್ಲಿ 4040 ಮಂದಿ ಮಾತ್ರ ಪಡಿತರ ಪಡೆಯುತ್ತಿದ್ದಾರೆ. ಕಿಲೋ ಅಕ್ಕಿಗೆ 15 ರೂ.ಗಳಂತೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ನ್ಯಾಯ ಬೆಲೆ ಅಂಗಡಿ ಮಾಲಿಕರು, ಎಣ್ಣೆ, ಸೋಪು ಇತ್ಯಾದಿ ಖರೀ ದಿಸಬೇಕೆಂದು ಕಡ್ಡಾಯ ಮಾಡ ದಂತೆ ಸೂಚನೆ ನೀಡಲಾಗಿದೆ. ಪಡಿತರ ಚೀಟಿ ಇಲ್ಲದವರಿಗೂ ಪಡಿತರ ನೀಡಲು ಸರ್ಕಾರದಿಂದ ಲಿಖೀತ ಆದೇಶ ಬಂದಿಲ್ಲವೆಂದು ಆಹಾರ ಇಲಾಖೆ ಉಪನಿರ್ದೇಶಕರು ತಿಳಿಸಿದರು.
ದಿನಸಿ ತರಕಾರಿ ಖರೀದಿಗೆ ಅವಕಾಶ: ಜನರು ದಿನಸಿ ತರಕಾರಿ ಕೊಳ್ಳಲು ಆರಂಭದಲ್ಲಿ ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ರವರೆಗೆ ಅವಕಾಶ ನೀಡಲಾಗಿತ್ತು. ದಿನಸಿ ಅಂಗಡಿ ಎಂದಿನಂತೆ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ದಿನಸಿ ಅಂಗಡಿ ಮಾಲೀಕರೇ ಸ್ವಯಂ ನಿರ್ಬಂಧ ಹೇರಿ ಬೆಳಿಗ್ಗೆ 6ರಿಂದ ಬೆ.10ರವರೆಗೆ ಮಾತ್ರ ಬಾಗಿಲು ತೆರೆಯುತ್ತಿದ್ದಾರೆ.
ಅಂತರವಿರಲಿ: ಹಾಪ್ಕಾಮ್ಸ್ ದಿನವಿಡೀ ತೆರೆಯುತ್ತಿದೆ. ದಿನಸಿ ಅಂಗಡಿಗಳಲ್ಲಿ, ತರಕಾರಿ ಕೊಳ್ಳಲು ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ 10 ಸಾವಿರ ಕುಟುಂಬಗಳಿಗೆ ತಲಾ ಒಂದು ಲೀಟರ್ ಉಚಿತ ಹಾಲು ವಿತರಿಸಲಾಗುತ್ತಿದೆ. 66 ಸ್ಲಂಗಳ 9005 ಕುಟುಂಬ, 600 ಮಂದಿ ವಲಸಿಗ ಕಾರ್ಮಿಕರು, ಹೊರಗಿನಿಂದ ಬಂದ 150 ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಹಾಲನ್ನು ವಿತರಿಸಲಾಗುತ್ತಿದೆ.
ಆಸ್ಪತ್ರೆಗಳಲ್ಲೂ ಅಗತ್ಯ ಸೌಲಭ್ಯ : ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸ ಲಾಗಿದೆ. ಇಲ್ಲಿ 18 ಹಾಸಿಗೆಗಳ ಐಸೋಲೇಷನ್ ವಾರ್ಡ್ ಇದೆ. 100 ಹಾಸಿಗೆಗಳ ವಾರ್ಡ್, 50 ಹಾಸಿಗೆಗಳ ಐಸಿಯು ಕೇರ್ ಸೆಂಟರ್ ಸಿದ್ಧವಾಗುತ್ತಿದೆ. ಪ್ರಸ್ತುತ 4 ವೆಂಟಿಲೇಟರ್ ಇದ್ದು, ಇನ್ನೂ 10 ವೆಂಟಿಲೇಟರ್ಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ವಾರದಲ್ಲಿ ಸಿದ್ಧವಾಗಲಿವೆ ಎಂದು ಡಿಎಚ್ಒ ಡಾ.ಎಂ.ಸಿ.ರವಿ ತಿಳಿಸಿದರು.
ಐಸೋಲೇಷನ್: ನಗರದ ಸರ್ಕಾರಿ ಮೆಡಿಕಲ್ ಕಾಲೇಜು, ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು, ಜೆಎಸ್ಎಸ್ ಆಸ್ಪತ್ರೆ, ಹೋಲಿಕ್ರಾಸ್, ಬಸವ ರಾಜೇಂದ್ರ ಆಸ್ಪತ್ರೆ ಸೂಪರ್ವೈಸ್ ಐಸೋಲೇಷನ್ ಸೆಂಟರ್ಗಳಾಗಿ ಪರಿವರ್ತಿಸಲಾಗಿದೆ.
ಕ್ವಾರಂಟೈನಲ್ಲಿ ಅಗತ್ಯ ವ್ಯವಸ್ಥೆ : ಚಾಮರಾಜನಗರದಲ್ಲಿ 2, ಗುಂಡ್ಲುಪೇಟೆ, ಯಳಂದೂರು, ಹನೂರಿನಲ್ಲಿ ತಲಾ ಒಂದೊಂದು ಫೀವರ್ ಕ್ಲಿನಿಕ್ ಇವೆ. ಅಂಬೇಡ್ಕರ್ ಭವನವನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು ಊಟ, ಟೀವಿ, ಪತ್ರಿಕೆ, ಮ್ಯಾಗ ಜೀನ್, ಒಳಾಂಗಣ ಆಟದ ಸೌಲಭ್ಯವಿದ್ದು 10 ಮಂದಿ ಕ್ವಾರಂ ಟೈನ್ನಲ್ಲಿದ್ದಾರೆ. 191 ಮಂದಿ ಅವಧಿ ಪೂರ್ಣಗೊಳಿಸಿದ್ದಾರೆಂದು ಡಿಎಚ್ಒ ಡಾ.ರವಿ ತಿಳಿಸಿದ್ದಾರೆ.
– ಕೆ.ಎಸ್. ಬನಶಂಕರ ಆರಾಧ್ಯ