ಚಾಮರಾಜನಗರದಲ್ಲಿ ಲಾಕ್ಡೌನ್ ಸಡಿಲಿಕೆ
ಜಿಲ್ಲೆಯಲ್ಲಿ ಮುಂದುವರಿದ ಮುಂಜಾಗ್ರತಾ ಕ್ರಮಗಳು; ವ್ಯಾಪಾರ ವಹಿವಾಟಿಗೆ ಅವಕಾಶ
Team Udayavani, May 1, 2020, 4:27 PM IST
ಸಾಂದರ್ಭಿಕ ಚಿತ್ರ
ಚಾಮರಾಜನಗರ: ಇದುವರೆಗೆ ಕೋವಿಡ್ ಪಾಸಿಟಿವ್ ಪ್ರಕರಣ ಇಲ್ಲದ ಕಾರಣ ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಗೊಳಿಸಿದ್ದು, ಕೆಲವು ನಿರ್ದಿಷ್ಟ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಜಿಲ್ಲಾದ್ಯಂತ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ-1961 ರಡಿಯಲ್ಲಿ 1860 ಅಂಗಡಿಗಳು ಹಾಗೂ 664 ವಾಣಿಜ್ಯ ಸಂಸ್ಥೆಗಳು ನೋಂದಣಿಯಾಗಿದ್ದು, ಈ ಕಾಯ್ದೆಯಡಿ ಮಾನ್ಯತೆ ಪಡೆದಿರುವ ಅಂಗಡಿಗಳು, ಸಂಸ್ಥೆಗಳು ಕೆಲ ಷರತ್ತಿಗೊಳಪಟ್ಟು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಕೋವಿಡ್-19 ಹರಡುವಿಕೆ ತಡೆಯುವ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲಾ ಹೋಟೆಲ್ಗಳು (ಪಾರ್ಸೆಲ್ ವ್ಯವ ಸ್ಥೆಗೆ ಮಾತ್ರ ಅವಕಾಶ ನೀಡಿದೆ), ಚಿತ್ರ ಮಂದಿರಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಷೌರಿಕ ಅಂಗಡಿಗಳು, ಬ್ಯೂಟಿ ಪಾರ್ಲರ್ಗಳು, ಮದ್ಯದಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಲಾಂಡ್ರಿಗಳು, ಬಟ್ಟೆ ಅಂಗಡಿಗಳನ್ನು ಮೇ 3ರವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಮೇಲ್ಕಾಣಿಸಿದ ಕೆಲವು ನಿರ್ದಿಷ್ಟ ವಲಯದ ವಹಿವಾಟು ಹೊರತುಪಡಿಸಿ ಉಳಿದೆಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಜಿಲ್ಲಾದ್ಯಂತ ಬುಧವಾರದಿಂದ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ರಸ್ತೆ, ಬೀದಿಗಳಲ್ಲಿ ಜನರ ಓಡಾಟ ವಿರಳ ರೀತಿಯಲ್ಲಿ ಆರಂಭವಾಗಿದೆ. ಅಂಗಡಿ ಮುಂಗಟ್ಟುಗಳು, ತರಕಾರಿ ಮಾರುಕಟ್ಟೆಯಲ್ಲಿ ವಹಿವಾಟು ಸಾಧಾರಣ ರೀತಿಯಲ್ಲಿದೆ. ಸಾರ್ವಜನಿಕ ಅಥವಾ ಖಾಸಗಿ ಸಾರಿಗೆ, ಆಟೋ ಸಂಚಾರಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶದಿಂದ ಜನರು ಪಟ್ಟಣಗಳತ್ತ ಬರುತ್ತಿಲ.
ಅಂತರ ಕಾಯ್ದುಕೊಳ್ಳಲು ಸೂಚನೆ
ಲಾಕ್ಡೌನ್ನಲ್ಲಿ ಸಡಿಲಿಕೆ ಇದ್ದರೂ ಜನರು, ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಕಾರ್ಮಿಕರು, ಸಿಬ್ಬಂದಿ ಕನಿಷ್ಠ ಒಂದು ಮೀಟರ್ ಭೌತಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಂಡು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಬೇಕು.
ಸುತ್ತಮುತ್ತಲಿನ ಪ್ರದೇಶವನ್ನು ಸ್ವತ್ಛತೆ ಹಾಗೂ ನೈರ್ಮಲ್ಯ ಕಾಪಾಡಲು ಅವಶ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.
ಕಾರ್ಮಿಕರು ಮತ್ತು ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ಗ್ಲೌಸ್, ಸ್ಯಾನಿಟೈಸರ್ ಒದಗಿಸಬೇಕು. ಕೈತೊಳೆಯಲು ಸೋಪು, ಸ್ಯಾನಿಟೈಸರ್ ಹಾಗೂ
ನೀರಿನ ವ್ಯವಸ್ಥೆ ಮಾಡಬೇಕು.
ಕೆಲಸ ನಿರ್ವಹಿಸುವ ಯಾವುದೇ ವ್ಯಕ್ತಿಗೆ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕಾರ್ಮಿಕರು, ಸಿಬ್ಬಂದಿಯನ್ನು ವಾಹನಗಳ ಮೂಲಕ ಒಟ್ಟಾಗಿ ಕರೆತರಬಾರದು.
ಲಾಕ್ಡೌನ್ ತೆರವಾಗಿದೆ ಎಂದು ಜನರು ನಿರ್ಲಕ್ಷ್ಯ ಮಾಡಬಾರದು. ಜಿಲ್ಲಾಡಳಿತ ನೀಡಿರುವ ಸೂಚನೆಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 58 ಮತ್ತು ಐಪಿಸಿ ಸೆಕ್ಷನ್ 188ರನ್ವಯ ಕಾನೂನು ಕ್ರಮ ಜರುಗಿಸಲಾಗುವುದು.
● ಡಾ. ಎಂ.ಅರ್.ರವಿ, ಜಿಲ್ಲಾಧಿಕಾರಿ
● ಕೆ.ಎಸ್.ಬನಶಂಕರ ಆರಾಧ್ಯ