ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾಧಿಗಳ ಸೇವೆಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ : ಡಿಸಿ ಆದೇಶ
Team Udayavani, Nov 1, 2020, 6:50 PM IST
ಹನೂರು (ಚಾಮರಾಜನಗರ): ಕೋವಿಡ್-19 ಹಿನ್ನೆಲೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಲವಾರು ಪೂಜಾ ಕೈಂಕರ್ಯಗಳು ಮತ್ತು ಸೇವೆಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ||ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಅಗ್ರಪಂಕ್ತಿಯಲ್ಲಿರುವ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕೋವಿಡ್-19 ಪ್ರಾರಂಭವಾದ ನಂತರ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿಗಳ ಅನುಸಾರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಹಲವು ಪೂಜಾ – ಕೈಂಕರ್ಯಗಳು ಮತ್ತು ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈ ಪೈಕಿ ಕೆಲವು ಸೇವೆಳಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದ್ದು ಕೆಲ ಸೇವೆಗಳಿಗೆ ನಿರ್ಬಂಧವನ್ನು ಮುಂದುವರೆಸಲಾಗಿದೆ.
ಯಾವ ಸೇವೆಗಳಿಗೆ ಮುಕ್ತ ಅವಕಾಶ: ಲಾಕ್ಡೌನ್ ತೆರವಾದ ನಂತರ ಬೆಳಿಗ್ಗೆ 7 ರಿಂದ ರಾತ್ರಿ 7ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಬೆಳಿಗ್ಗೆ 4 ಗಂಟೆ ಮತ್ತು ಸಂಜೆ 7ರ ವೇಳೆ ನಡೆಯುವ ಅಭಿಷೇಕ ಪೂಜಾ ಕೈಂಕರ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ನಡೆಸುತ್ತಿದ್ದ ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವ ಸೇರಿದಂತೆ ಎಲ್ಲಾ ಉತ್ಸವಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ರಾಜ್ಯೋತ್ಸವ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲು: ಪೊಲೀಸರಿಂದ ಲಾಠಿ ಚಾರ್ಜ್
ಭಕ್ತಾಧಿಗಳು ಹರಕೆ ಹೊತ್ತು ಸಮರ್ಪಿಸುತ್ತಿದ್ದ ಮುಡಿಸೇವಗೂ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳ ತಂಗುವಿಕೆಗಾಗಿ ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಿಕೆಗೊಳಿಸಿ ಕಾಟೇಜು, ಡಾರ್ಮಿಟರಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳ ತಂಗುವಿಕೆಗಾಘಿ ನೀಡುವ ಕೊಠಡಿಗಳ ಸ್ಯಾನಿಟೈಸ್ ಮತ್ತು ಶುದ್ಧೀಕರಣ ಮಾಡಲು ಈ ಹಿಂದೆ ನೀಡುತ್ತಿದ್ದ ಶುಕ್ದ ಜೊತೆ ಹೆಚ್ಚುವರಿಯಾಗಿ 100ರೂ ವಿಧಿಸಲು ತೀರ್ಮಾನಿಸಲಾಗಿದೆ. ದೇವಾಲಯದ ವೆಬ್ಸೈಟ್ ಮೂಲಕ ನೀಡುತ್ತಿದ್ದ ಆನ್ಲೈನ್ ಸೇವೆಗಳನ್ನು ಪ್ರಾರಂಭಿಸಲಾಗಿದೆ.
ಯಾವುದೆಲ್ಲಾ ನಿಷೇಧ: ನಿಬಂಧಗಳಲ್ಲಿ ಸಡಿಲಿಕೆ ಮಾಡಿರುವ ಜಿಲ್ಲಾಡಳಿತ ಕೆಲ ನಿಷೇಧಗಳನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. ದೇವಾಲಯಕ್ಕೆ 12 ವರ್ಷಕ್ಕಿಂತ ಕಿರಿಯರು ಮತ್ತು 65 ವಯಸ್ಸಿನವರಿಗಿಂತ ಹಿರಿಯರ ಪ್ರವೇಶವನ್ನು ನಿರ್ಬಂಧಿಸಿದೆ. ದೇವಾಲಯದ ಕೊಠಡಿ, ಡಾರ್ಮಿಡರಿ ಹೊರತುಪಡಿಸಿ ರಂಗಮಂದಿರ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಂಗುವಿಕೆಯನ್ನು ನಿರ್ಬಂಧಿಸಿದೆ. ದೇವಾಲಯದ ದಾಸೋಹ ಭವನದಲ್ಲಿ ದಾಸೋಹ ವ್ಯವಸ್ಥೆಗೆ ಇದ್ದ ನಿರ್ಬಂಧವನ್ನು ಮುಂದುವರೆಸಿ ತಿಂಡಿ ವಿತರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಭಕ್ತರ ಸಂಖ್ಯೆ ಹೆಚ್ಚಳ: ನ. 4ರಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಸಮಯ ವಿಸ್ತರಣೆ
ಇನ್ನುಳಿದಂತೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಿದ್ದು ದೇವಾಲಯದ ಧ್ವನಿವರ್ಧಕ, ಸೂಚನಾ ಫಲಕಗಳಲ್ಲಿ ನೀಡುವ ಸೂಚನೆಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ.