ವಿದ್ಯುತ್ ಕಂಬಗಳಿರುವ ಸುಸಜ್ಜಿತ ರಸ್ತೆಯಲ್ಲಿ ಬೆಳಕೇ ಇಲ್ಲ!
ಅಪಘಾತಕ್ಕೆ ಆಹ್ವಾನ ನೀಡುವ ಡಬಲ್ ರಸ್ತೆಗೆ ದೀಪ ವ್ಯವಸ್ಥೆ ಕಲ್ಪಿಸಲು ಆಗ್ರಹ ರಾತ್ರಿ, ಬೆಳಗಿನ ಜಾವ ಕಗ್ಗತ್ತಲಿನಲ್ಲೇ ವಾಹನಗಳ ಸಂಚಾರ
Team Udayavani, Feb 5, 2021, 2:41 PM IST
ಕೊಳ್ಳೇಗಾಲ: ಪಟ್ಟಣದ ಆರ್ಎಂಸಿ ಡಬಲ್ ರಸ್ತೆಯು ಸದಾ ವಾಹನಗಳು, ಜನಜಂಗುಳಿಯಿಂದ ಕೂಡಿರುತ್ತದೆ. ಸುಸಜ್ಜಿತ ಈ ರಸ್ತೆಯಲ್ಲಿ ವಿದ್ಯುತ್ ಕಂಬಗಳಿದ್ದರೂ ದೀಪುಗಳು ಇಲ್ಲದ ಪರಿಣಾಮ ರಾತ್ರಿ, ನಸುಕಿನ ವೇಳೆ ವಾಹನ ಸವಾರರು ಹಿಂಸೆ ಅನುಭವಿಸುವಂತಾಗಿದೆ.
ಕಳೆದ 3 ವರ್ಷಗಳ ಹಿಂದೆ ನಗರ ಸಭೆ ಅಧಿಕಾರಿಗಳು ಕಿರಿದಾದ ಆರ್ಎಂಸಿ ರಸ್ತೆಯನ್ನು ವಿಸ್ತರಣೆ ಮಾಡುವ ಸಲುವಾಗಿ ಎರಡು ರಸ್ತೆಯ ಬದಿಯಲ್ಲಿದ್ದ ಮನೆ ಅಂಗಡಿಗಳನ್ನು ತೆರವುಗೊಳಿಸಿ, 80 ಅಡಿಯ ಡಬಲ್ ರಸ್ತೆಯನ್ನಾಗಿ ನಿರ್ಮಿಸಿದ್ದರು. ರಸ್ತೆ ವಿಭಜಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ದೀಪದ ಭಾಗ್ಯವಿಲ್ಲದೆ ಬಣಗುತ್ತಿದೆ.
ಶಾಸಕರು ಪ್ರತಿದಿನ ಈ ಆರ್ಎಂಸಿ ಡಬಲ್ ರಸ್ತೆ ಮೂಲಕ ತಮ್ಮ ನಿವಾಸಕ್ಕೆ ತೆರಳಬೇಕಿದೆ. ಅಧಿಕಾರಿಗಳು ಕೂಡ ಈ ಭಾಗದಲ್ಲೇ ಸಂಚರಿಸುತ್ತಾರೆ. ಸಮಸ್ಯೆಯ ಅರಿವಿದ್ದರೂ ಬೀದಿ ದೀಪ ಹಾಕಿಸಲು ನಿರ್ಲಕ್ಷ್ಯವಹಿಸಿದ್ದಾರೆ. ಪಟ್ಟಣದ ಹೃದಯಭಾಗ ದಲ್ಲೇ ಈ ರೀತಿ ಅವ್ಯವಸ್ಥೆಯಿದ್ದರೆ, ಇನ್ನು ಬಡಾವಣೆ, ಗ್ರಾಮಗಳಲ್ಲಿ ಯಾವ ರೀತಿ ಸಮಸ್ಯೆಗಳಿರಬಹುದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮಾರು ಕಟ್ಟೆ: ಪಟ್ಟಣದ ಆರ್ಎಂಸಿ ಮಾರುಕಟ್ಟೆಗೆ ಬೆಳಗಿನ ಜಾವ 4 ಗಂಟೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ತರಕಾರಿ, ಹಣ್ಣು ಹೂ ಮತ್ತಿತರರ ಸರಕು, ಸಾಮಗ್ರಿಗಳನ್ನು ಹೊತ್ತು ಬರುವ ವಾಹನಗಳು ಈ ಡಬಲ್ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ, ದೀಪದ ಬೆಳಕಿಲ್ಲದೆ ಕತ್ತಲಿನಲ್ಲಿ ಓಡಾಡುವಂತೆ ಆಗಿದೆ.
ಇದನ್ನೂ ಓದಿ :ಮೃಗಾಲಯ ನಿರ್ವಹಣೆಗೆ 104 ಕೋಟಿ ರೂ.ಮೀಸಲಿಡಿ
ಅಪಘಾತ ಆಹ್ವಾನ: ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಸೊಪ್ಪು ಇನ್ನಿತರ ಸಾಮಗ್ರಿಗಳನ್ನು ಆಟೋ, ಬೈಕ್, ಗೂಡ್ಸ್ ಸೇರಿ ದಂತೆ ವಿವಿಧ ವಾಹನಗಳಲ್ಲಿ ಸಾಗಣೆ ಮಾಡುವ ವೇಳೆ ರಸ್ತೆ ಕತ್ತಲಿನಿಂದ ಕೂಡಿರುವುದರಿಂದ ಅಪಘಾತಕ್ಕೆ ಆಹ್ವಾನಿಸುವಂತಾಗಿದೆ. ಈ ರಸ್ತೆಯಲ್ಲಿ ಪಾದಚಾರಿಗಳು ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ. ಅಪಘಾತಗಳು ಸಂಭವಿಸಿ, ಹಲವರು ಗಾಯ ಮಾಡಿಕೊಂಡಿರುವ ನಿದರ್ಶನಗಳು ಇವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
ಕುರುಬನಕಟ್ಟೆ ದೇಗುಲ: ಇದೇ ರಸ್ತೆ ಯಲ್ಲಿ ಕುರುಬನ ಕಟ್ಟೆ ದೇವಾಲಯಕ್ಕೆ ತೆರಳುವ ಭಕ್ತಾದಿಗಳು, ವಾಹನಗಳು ಸಂಚರಿಸುವುದರಿಂದ ಸದಾ ಜನಜಂಗುಳಿ ಇರುತ್ತದೆ. ರಾತ್ರಿ ವೇಳೆ, ಮುಂಜಾನೆ ಯಲ್ಲಿ ಕಗ್ಗತ್ತಲಿನಲ್ಲಿ ಓಡಾಡುತ್ತು ಈ ಅವ್ಯವಸ್ಥೆಗೆ ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ.
ನಾಯಿ ಉಪಟಳ: ಬೆಳ ಗಿನ ಜಾವ 4 ಗಂಟೆಗೆ ತರಕಾರಿ ಬೆಳೆದ ರೈತರು ಮತ್ತು ಮಹಿಳೆಯರು ನಡೆದು ಬರುವಾಗ ನಾಯಿಗಳ ಕಾಟ ಇರುವುದರಿಂದ ಭಯಪಡುತ್ತಿದ್ದಾರೆ. ಅಲ್ಲದೇ ವಾಹನ ಸಾವರರನ್ನು ನಾಯಿಗಳು ಅಟ್ಟಿಸಿಕೊಂಡು ಬರುವುದರಿಂದ ಭಯದ ವಾತಾವರಣ ಇರುತ್ತದೆ. ಕೂಡಲೇ ಈ ರಸ್ತೆಯಲ್ಲಿ ಬೀದಿ ದೀಪದ ವ್ಯವಸ್ಥೆ ಮಾಡಬೇಕು ಎಂದು ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸೋಮ ಶೇಖರ್ ಮತ್ತಿತರರು ಆಗ್ರಹಿಸಿದ್ದಾರೆ.