ಭತ್ತದ ನಾಟಿ ಕಾರ್ಯ ಚುರುಕು, ಶೇ.80ರಷ್ಟು ಪೂರ್ಣ
ಯಳಂದೂರು ತಾಲೂಕಿಗೆ ಕೃಷಿ ಇಲಾಖೆಯಿಂದ 1200 ಕ್ವಿಂಟಲ್ ಬಿತ್ತನೆ ಭತ್ತ ಬೀಜ ವಿತರಣೆ
Team Udayavani, Sep 23, 2021, 4:49 PM IST
ಯಳಂದೂರು: ತಾಲೂಕಿನಾದ್ಯಂತ ಭತ್ತದ ನಾಟಿ ಕಾರ್ಯ ಚುರುಕುಗೊಂಡಿದ್ದು ಶೇ.80ರಷ್ಟು ಪ್ರಮಾಣದಲ್ಲಿ ನಾಟಿ ಮಾಡಿ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.
ಕೃಷಿ ಇಲಾಖೆಯು ಈ ಬಾರಿ 1200 ಕ್ವಿಂಟಲ್ ಭತ್ತದ ಬಿತ್ತನೆ ಬೀಜವನ್ನು ವಿತರಿಸಿದ್ದಾರೆ. ಐಆರ್ 64, ಬಿಪಿಟಿ, ಜ್ಯೋತಿ ಸೇರಿದಂತೆ ಇತರೆ ತಳಿಗಳ ಭತ್ತದ ಬೀಜವನ್ನು ನಿಗದಿಪಡಿಸಿದ ಕೇಂದ್ರಗಳಲ್ಲಿ ರೈತರಿಗೆ ಪೂರೈಕೆ ಮಾಡಿ ತಮ್ಮ ಜಮೀನುಗಳಲ್ಲಿ ಒಟ್ಲುಪಾತೆ ಮಾಡಿ ಭತ್ತ ಪೈರನ್ನು ನಾಟಿ ಕಾರ್ಯದಲ್ಲಿ ರೈತರು ತೊಡಗಿಕೊಂಡಿರುವ ದೃಶ್ಯಗಳು ಕಂಡು ಬರುತ್ತಿದೆ.
ರೈತರು ವಿಶ್ರಾಂತಿ ಇಲ್ಲದೇ ದಿನದ ಬಹುಪಾಲು ಹೆಚ್ಚಿನ ಸಮಯವನ್ನು ತಮ್ಮ ಜಮೀನುಗಳ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ರೈತರು ವರ್ಷದಲ್ಲಿ 2 ಬಾರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ಭತ್ತದ ಬಿತ್ತನೆ ಹಾಗೂ ನಾಟಿಯ ಸಮಯವಾದರೆ ಮತ್ತೂಂದು ಸುಗ್ಗಿಯ ವೇಳೆ ಹೆಚ್ಚಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಜಮೀನುಗಳಲ್ಲಿ ನಾಟಿಯ ಕಾರ್ಯವು ಭರದಿಂದ ಸಾಗಿದೆ. ಬಿಡುವಿಲ್ಲದೇ ದುಡಿಯುತ್ತಿದ್ದಾರೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದ ಉರಿಯಲ್ಲಿ ಮೂವರು ಪಾಕ್ ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು
ರಸಗೊಬ್ಬರ, ಕೀಟನಾಶಕದ ಕೊರತೆ ಇಲ್ಲ:
ತಾಲೂಕಿನಾದ್ಯಂತ ಭತ್ತದ ಬಿತ್ತನೆ ಕಾರ್ಯವು ನಡೆಯುತ್ತಿದ್ದು, ರೈತರಿಗೆ ಭತ್ತದ ಬಿತ್ತನೆ ಬೀಜ ಸೇರಿದಂತೆ ರಸಗೊಬ್ಬರ ಹಾಗೂ ಕೀಟನಾಶಕ ಔಷಧಿಗಳ ಕೊರತೆಯಾಗದಂತೆ ಕೃಷಿ ಇಲಾಖೆಯು ಅಗತ್ಯ ಕ್ರಮಕೈಗೊಂಡಿದೆ. ರಸಗೊಬ್ಬರವನ್ನು ಈಗಾಗಲೇ ಖಾಸಗಿ ಅಂಗಡಿಗಳು ಸೇರಿದಂತೆ ಇತರೆ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಕೆ ಮಾಡಲಾಗಿದೆ. ಪ್ರಮುಖವಾಗಿ ಯೂರಿಯಾ, 20 20 0 13, ಪೊಟ್ಯಾಷ್, ಸೇರಿದಂತೆ ಇತರೆ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ. ಅಲ್ಲದೇ ನಾಟಿ ನಂತರ ಬೆಳೆಗೆ ತಗುಲುವ ರೋಗಗಳ ಹತೋಟಿಗೆ ಅಗತ್ಯವಾದ ಔಷಧಿಗಳನ್ನು ಸಹ ದಾಸ್ತಾನು ಮಾಡಿಕೊಂಡಿದ್ದು, ರೈತರು ಯಾವುದೇ ಸಂದರ್ಭದಲ್ಲಿ ಬಂದರೂ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.
ಕೃಷಿ ಇಲಾಖೆ ಸಜ್ಜು: ತಾಲೂಕಿನ ವಿವಿದೆಡೆ ಭತ್ತದ ನಾಟಿ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಜತೆಗೆ ರಸಗೊಬ್ಬರ, ಕೀಟನಾಶಕದ ಸಮಸ್ಯೆ ತಲೆದೋರ ದಂತೆ ಕ್ರಮಕೈಗೊಳ್ಳಲಾಗಿದ್ದು, ಈ ಬಾರಿ ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕೃಷಿ ಇಲಾಖೆ ಸಜ್ಜಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟರಂಗಶೆಟ್ಟಿ ತಿಳಿಸಿದ್ದಾರೆ.
ಯೂರಿಯಾ ಜತೆ ಮತ್ತೊಂದು ರಸಗೊಬ್ಬರ ಖರೀದಿಗೆ ಒತ್ತಡ! ತಾಲೂಕಿನ ರಸಗೊಬ್ಬರ ಅಂಗಡಿಗಳಲ್ಲಿ ರಸಗೊಬ್ಬರಕ್ಕೆ ನಿಗದಪಡಿಸಿದ ದರಕ್ಕಿಂತ ಹೆಚ್ಚು ಬೆಲೆ ಪಡೆಯಲಾಗುತ್ತಿದೆ. ಯೂರಿಯಾ ಗೊಬ್ಬರವನ್ನು ಪ್ರತ್ಯೇಕವಾಗಿ ನೀಡುತ್ತಿಲ್ಲ. ಜತೆಗೆ ಮತ್ತೊಂದು ರಸಗೊಬ್ಬರವನ್ನು ಖರೀದಿಬೇಕು. ಇಲ್ಲದಿದ್ದರೆ ಗೊಬ್ಬರವನ್ನು ನೀಡುವುದಿಲ್ಲ. ಬಲವಂತ ಮಾಡಿ ಬೇರೆ ಗೊಬ್ಬರವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಕೃಷಿ ಇಲಾಖೆಯ ಜಾಗೃತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು. ರೈತರಿಗೆ ಅನುಕೂವನ್ನು ಕಲ್ಪಿಸಬೇಕಾಗಿದೆ ಎಂದು ರೈತ
ಮಹಾದೇವಸ್ವಾಮಿ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
-ಫೈರೋಜ್ ಖಾನ್