ಹನೂರು : ಅಕ್ರಮ ಕಳ್ಳಭಟ್ಟಿ ಮಾರಾಟ; ಆರೋಪಿ ಬಂಧನ
Team Udayavani, Aug 19, 2021, 8:11 PM IST
ಹನೂರು : ಅಕ್ರಮವಾಗಿ ಕಳ್ಳಭಟ್ಟಿ ಮಾರಾಟ ಮಾಡುತ್ತಿದವರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿರುವ ಘಟನೆ ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ದೊಮ್ಮನಗದ್ದೆ ಗ್ರಾಮದ ಗಣೇಶ್ ಎಂಬಾತ ಬಂಧಿತ ಆರೋಪಿ.
ಈತನಿಂದ ಸುಮಾರು 2 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ನಾಯಿಬೇಲದ ಚಕ್ಕೆಯನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ತೀರ್ಥಹಳ್ಳಿ ಮೂಲದ ವ್ಯಕ್ತಿ ಅಫ್ಘಾನ್ ನಲ್ಲಿ ಅತಂತ್ರ!
ಘಟನೆಯ ವಿವರ : ಬಂಧಿತ ಆರೋಪಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಿಲ್ಲಾ ಆಯುಕ್ತ ಹಾಗೂ ಅಧೀಕ್ಷಕ ಎಂ.ಡಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಅಬಕಾರಿ ನೀರಿಕ್ಷಕ ಸುನೀಲ್.ಡಿ ತಮ್ಮ ಸಿಬ್ಬಂದಿಗಳೊಡನೆ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ದಸ್ತಗಿರಿ ಮಾಡಿದರು.
ಈ ಸಂಬಂಧ ಕೊಳ್ಳೇಗಾಲ ಅಬಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ಮಹೇಶ್. ಎಸ್, ಚಾ.ನಗರ ಉಪನಿರೀಕ್ಷಕಿ ನಂದಿನಿ.ಬಿ.ಪಿ, ಅನುವಂತಸಿಂಗ್, ಸಿಬ್ಬಂದಿಗಳಾದ ಕೃಷ್ಣಮೂರ್ತಿ. ಬಿ.ವಿ, ರವಿಕುಮಾರ್.ಬಿ, ರಮೇಶ್.ಎಂ, ಸುಜನ್ ರಾಜ್.ಎನ್, ಚಾಲಕ ಮಂಜುಪ್ರಸಾದ್.ಸಿ, ದೇವರಾಜು.ಎಂ ಪಾಲ್ಗೊಂಡಿದ್ದರು.