ಚಾಮರಾಜನಗರ: ಹುಲಿ ದಾಳಿಗೆ ವ್ಯಕ್ತಿ ಬಲಿ
Team Udayavani, Sep 1, 2019, 9:13 AM IST
ಸಾಂದರ್ಭಿಕ ಚಿತ್ರ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತನೋರ್ವ ಹುಲಿ ದಾಳಿಗೆ ಬಲಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಹುಲಿದಾಳಿಯಿಂದ ಸಾವಿಗೀಡಾದ ರೈತನನ್ನು 55 ವರ್ಷದ ಶಿವಮಾದಯ್ಯ ಎಂದು ಗುರುತಿಸಲಾಗಿದೆ.
ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದಲ್ಲಿ, ಮಂಗಲ ಗ್ರಾಮದಿಂದ ಚೌಡಹಳ್ಳಿಗೆ ಎತ್ತುಗಳೊಂದಿಗೆ ಬರುತ್ತಿದ್ದಾಗ ಘಟನೆ ನಡೆದಿದೆ. ಮಂಗಲದಲ್ಲಿರುವ ಸಂಬಂಧಿಕರ ಮನೆಯಿಂದ ಎತ್ತುಗಳನ್ನು ಪಡೆದು ತಮ್ಮೂರಿಗೆ ಶನಿವಾರ ಸಂಜೆ ಹಿಂತಿರುಗುತ್ತಿದ್ದರು.
ಆ ಸಮಯದಲ್ಲಿ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಬೆದರಿದ ಎತ್ತುಗಳು ಮನೆಗೆ ಹಿಂದಿರುಗಿದಾಗ ಸಂಶಯಗೊಂಡ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯ ಶವ ಪತ್ತೆಯಾಗಿದೆ.