ಕ್ಷೇತ್ರದ ಮೂಲ ಸೌಲಭ್ಯಕ್ಕೆ ಆದ್ಯತೆ
Team Udayavani, Aug 31, 2020, 1:07 PM IST
ಗುಂಡ್ಲುಪೇಟೆ: ಕ್ಷೇತ್ರಕ್ಕೆ ಉತ್ತಮ ರಸ್ತೆ, ಚರಂಡಿ ಮತ್ತು ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯವನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗದ ನಿಯಮಿತದ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು.
ತಾಲೂಕಿನ ಬೇಗೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಆಯೋಜಿಸಿದ್ದ ವಸತಿ ನಿಲಯ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬೇಗೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಎರಡು ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಸುತ್ತಮುತ್ತಲ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈಗಾಗಲೇ ತಾಲೂಕಿನ ಚಿಕ್ಕಾಟಿ ಮತ್ತು ಚನ್ನವಡೆಯನಪುರ, ತೊರವಳ್ಳಿ, ಭೀಮ ನಬೀಡು, ಕೆಬ್ಬೇಪುರ, ಬಾಚಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಂತೆಯೇ ತೆರಕಣಾಂಬಿಹುಂಡಿ ಗ್ರಾಮದ ಶ್ರೀರಾಮಲಿಂಗಚೌಡೇಶ್ವರಿ ದೇವಸ್ಥಾನದ ಬಳಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ತಾಪಂ ಅಧ್ಯಕ್ಷ ಮಧುಶಂಕರ್, ಜಿಪಂ ಸದಸ್ಯೆ ರತ್ನಮ್ಮಶ್ರೀಕಂಠಪ್ಪ, ತಾಪಂ ಸದಸ್ಯ ಪ್ರಭಾಕರ್, ತಾಯಮ್ಮಣಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಬೇಗೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂದೀಪ್ ಬೆಳಚಲವಾಡಿ, ಮಂಡಲ ಅಧ್ಯಕ್ಷ ಜಗದೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಂ.ನಂದೀಶ್, ರಾಘವಾಪುರ ದೇವಯ್ಯ, ಮಹದೇವ ಪ್ರಸಾದ್, ಕುಮಾರ್, ಆಟೋ ದೇವು ಇದ್ದರು.
………………………………………………………………………………………………………………………………………………..
ವಿದ್ಯಾರ್ಥಿಗಳಿಗೆ ಸನ್ಮಾನ : ಕೊಳ್ಳೇಗಾಲ: ಪಟ್ಟಣದ ಮದ್ದೇವಾಂಗ ಯುವ ವೇದಿಕೆಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಭಾನುವಾರ ಸನ್ಮಾನಿಸಿದರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವೈದ್ಯರಾದ ಡಾ.ಇ.ಎ.ಗೀತಾಂಜಲಿ ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಪೋಷಕರು ಒತ್ತಡ ಹೇರದೆ, ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕು. ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಪೋಷಕರು ಸಹಕಾರಿಯಾಗಬೇಕು ಎಂದು ಹೇಳಿದರು. ಸುಬ್ರಮಣ್ಯ ದೇವಾಲಯ ಅರ್ಚಕ ಡಾ.ಬಾಲಸುಬ್ರಮಣ್ಯಂ, ನಗರಸಭೆ ಸದಸ್ಯ ಪರಮೇಶ್ವರಯ್ಯ, ಮುಖಂಡ ಶಿವಕುಮಾರ್, ನಿರಂಜನ್ ರವಿ, ಶ್ರೀಮದ್ದೇವಾಂಗ ಯುವ ವೇದಿಕೆಯ ಅಧ್ಯಕ್ಷ ಲಕ್ಷ್ಮೀಪತಿ, ಉಪಾಧ್ಯಕ್ಷ ಚೇತನ್, ಖಜಾಂಚಿ ಎ.ವಿ.ಗೋಪಾಲಕೃಷ್ಣ, ಕಾರ್ಯದರ್ಶಿ ಬಿ.ಗೋವಿಂದರಾಜು, ನಾಗೇಂದ್ರ, ಸುರೇಶ್, ರಾಜೇಶ್ ಹಾಜರಿದ್ದರು.