ಮನೆ ಮನೆಗೆ ನೀರು ಯೋಜನೆ ಚುರುಕುಗೊಳಿಸಿ
Team Udayavani, Feb 9, 2022, 2:32 PM IST
ಚಾಮರಾಜನಗರ: ಗ್ರಾಮೀಣ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿಕಾಮಗಾರಿ ವಿಳಂಬ ಹಾಗೂ ಪೂರ್ಣಗೊಳಿಸದೇ ಇದ್ದಲ್ಲಿಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದರು.
ಗ್ರಾಮೀಣ ಪ್ರದೇಶದ ಪ್ರತೀ ಮನೆಗಳಿಗೂ ಜಲ ಜೀವನ್ ಮಿಷನ್ ಯೋಜನೆಯಡಿ ನಳ ಸಂಪರ್ಕಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುತ್ತಿದೆ. ಕೆಲ ತಾಲೂಕುಗಳಲ್ಲಿ ಕಾಮಗಾರಿ ಚುರುಕಾಗಬೇಕಿದೆ. ಈ ತಿಂಗಳು ಹಾಗೂ ಮುಂದಿನ ತಿಂಗಳಿನ ವೇಳೆಗೆ ಪೂರ್ಣಗೊಳಿಸಲು ನಿಗದಿಯಾಗಿರುವ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಮುಗಿಸಬೇಕು ಎಂದು ತಾಕೀತು ಮಾಡಿದರು.
ಕಾಲಮಿತಿ: ಕಾಮಗಾರಿಗೆ ವೇಗ ನೀಡಲು ಹಾಗೂ ಏಕಕಾಲದಲ್ಲಿ ಎಲ್ಲೆಡೆ ಪ್ರಗತಿಯಾಗಲು ಹೆಚ್ಚು ಬ್ಯಾಚ್ ಗಳಲ್ಲಿ ಕೆಲಸ ನಿರ್ವಹಿಸಬೇಕು. ಗುತ್ತಿಗೆದಾರರು, ಎಂಜಿನಿಯರ್ಗಳು ಹಾಗೂ ಅಧಿಕಾರಿಗಳ ಸಭೆಯನ್ನುಕೂಡಲೇ ಕರೆದು ಕಾಮಗಾರಿ ಶೀಘ್ರಗತಿಯಲ್ಲಿಪೂರ್ಣವಾಗಲು ಗಡುವು ನೀಡಬೇಕು. ಪ್ರತಿ ವಾರವು ಇಂತಿಷ್ಟು ಕಾಮಗಾರಿಗಳನ್ನು ಕಾಲಮಿತಿಯಲ್ಲಿಮುಗಿಸಲೇಬೇಕೆಂಬ ನಿರ್ದೇಶನ ನೀಡಬೇಕು. ಕಾಮಗಾರಿ ಪ್ರಗತಿ ಪರಿಶೀಲಿಸಬೇಕು. ಕಾಮಗಾರಿನಿರ್ವಹಣೆಯಲ್ಲಿ ವಿಳಂಬ ಹಾಗೂ ಕಾಲಮಿತಿಯಲ್ಲಿಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆಸೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಹಣದ ಕೊರತೆ ಇಲ್ಲ: ಜಲಜೀವನ್ ಮಿಷನ್ ಯೋಜನೆಗೆ ಹಣದ ಕೊರತೆಯಿಲ್ಲ. 2023ರೊಳಗೆಗ್ರಾಮದ ಜನವಸತಿ ಕುಟುಂಬಗಳಿಗೆ ನಲ್ಲಿ ಮೂಲಕಸಂಪರ್ಕ ಕಲ್ಪಿಸುವ ಯೋಜನೆ ಪೂರ್ಣವಾಗಬೇಕಿದೆ. ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಸಂಪರ್ಕ ಕಲ್ಪಿಸಿ ನೀರು ಪೂರೈಸಬೇಕು. ಟ್ರಯಲ್ ರನ್ ಗಳನ್ನು ಪೂರ್ಣಗೊಳಿಸಿ ನೀರುಒದಗಿಸುವ ಕೆಲಸ ತ್ವರಿತವಾಗಿ ಆಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಗುಣಮಟ್ಟದ ಕೆಲಸ ಆಗಬೇಕು. ನಿಗದಿತ ಆಳದಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ಆಗಬೇಕು. ನೀರು ಸಂಗ್ರಹಕ್ಕೆಹೆಚ್ಚುವರಿ ಟ್ಯಾಂಕ್ ಗಳನ್ನು ಸಿದ್ಧಪಡಿಸಿಕೊಳ್ಳಬೇಕು.ಏಕಕಾಲದಲ್ಲಿ ಎಲ್ಲಾ ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಾಗಬೇಕು ಎಂದರು.
ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರ ಹಾಗೂ ಕೊಳ್ಳೇಗಾಲ ಟಗರುಪುರ ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಶ್ವತ ಕುಡಿಯುವನೀರು ಸರಬರಾಜು ಮಾಡುವ ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಪ್ರಗತಿ ಪರಿಶೀಲಿಸಿದಸಚಿವರು, ಯಾವುದೇ ಸಮಸ್ಯೆಗಳಿದ್ದರೂಪರಿಹರಿಸಬೇಕು. ವಿಳಂಬ ಮಾಡದೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ಯಾಲೆಂಡರ್ ಅನ್ನು ಸಚಿವರು ಬಿಡುಗಡೆ ಮಾಡಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್. ಮಹೇಶ್,ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ. ರಾಮಚಂದ್ರ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಜಯರಾಮ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್,ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್ ಇತರರಿದ್ದರು.
ನರೇಗಾದಡಿ ಯಾರೇ ಕೇಳಿದರೂ ಕೆಲಸ ಕೊಡಿ :
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಯಾರೇ ಕೇಳಿದರೂ ಕೆಲಸ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ ಗುರಿ ಮೀರಿಯೂ ಅಗತ್ಯ ಕಾಮಗಾರಿಗಳನ್ನು ಬೇಡಿಕೆಗೆಅನುಸಾರವಾಗಿ ನಿರ್ವಹಿಸಬೇಕು. ಕಲ್ಯಾಣಿ, ಕೆರೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು. ಮುಖ್ಯರಸ್ತೆಗಳಲ್ಲಿ ಬರುವ ಕೆರೆಗಳ ಅಭಿವೃದ್ಧಿಗೂ ವಿಶೇಷ ಗಮನ ಹರಿಸಬೇಕು. ಸ್ವತ್ಛ ಭಾರತ್ ಮಿಷನ್ ಗ್ರಾಮ ಯೋಜನೆಯಡಿ ಶೌಚಾಲಯಗಳು ಪೂರ್ಣವಾಗಬೇಕು. ತ್ಯಾಜ್ಯ ನಿರ್ವಹಣೆ ಸಂಬಂಧ ಪ್ರಕ್ರಿಯೆಗಳಿಗೆಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.