ಆಸ್ತಿ ವಿವಾದ: ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ ಮಗನನ್ನೇ ಕೊಂದ ತಂದೆ!
Team Udayavani, Jun 28, 2020, 12:14 PM IST
ಆರೋಪಿ ತಂದೆ ಮಹಾದೇವಪ್ಪ
ಚಾಮರಾಜನಗರ: ತಂದೆ – ಮಗನ ಜೊತೆಗಿನ ಆಸ್ತಿ ವಿವಾದ ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ರವಿವಾರ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನ ಹುಂಡಿಯಲ್ಲಿಈ ದುರ್ಘಟನೆ ನಡೆದಿದ್ದು, ಮಲ್ಲಿಕಾರ್ಜುನಪ್ಪ (46) ಎಂಬಾತನೇ ಕೊಲೆಯಾದ ವ್ಯಕ್ತಿ. ಈತನ ತಂದೆ ಮಹಾದೇವಪ್ಪ ಕೊಲೆಗೈದಿದ್ದು, ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ತಂದೆ ಮಹಾದೇವಪ್ಪ ಮಗ ಮಲ್ಲಿಕಾರ್ಜುನಪ್ಪನಿಗೆ ಆಸ್ತಿಯಲ್ಲಿ ಪಾಲು ನೀಡಿರಲಿಲ್ಲ. ಈ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು.
ಇಂದು ಮಗ ಮಲ್ಲಿಕಾರ್ಜುನಪ್ಪ ಜಮೀನಿನಲ್ಲಿ ಮರ ಕಡಿಯಲು ಹೋದಾಗ ಜಗಳ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ತಂದೆ ಮತ್ತು ಸೋದರರು ಮಲ್ಲಿಕಾರ್ಜುನನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡ ಮಲ್ಲಿಕಾರ್ಜುನಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜಾನುವಾರುಗಳಿಗೆ ಮೇವು ಹಾಕದ್ದಕ್ಕೆ ಮಗನನ್ನು ಕೊಚ್ಚಿ ಕೊಂದ ಅಪ್ಪ!
ಘಟನೆಯ ನಂತರ ಆರೋಪಿ ತಂದೆ ಮಹಾದೇವಪ್ಪ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಗೆ ಸಹಕರಿಸಿದ್ದ ಎರಡನೇ ಮಗ ಮಂತ್ರಪ್ಪ, ಮಗಳು ಇಂದ್ರಮ್ಮ, ಮೊಮ್ಮಗ ಸುಭಾಷ್ ನಾಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಗುಂಡ್ಲುಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.