ಬಾಕಿ ಹಣ ಪಾವತಿಸಲು ಆಗ್ರಹಿಸಿ ಧರಣಿ
Team Udayavani, Oct 1, 2019, 3:00 AM IST
ಕೊಳ್ಳೇಗಾಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಮಿತಿ ನಿಯಮಿತ ವತಿಯಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ 9 ತಿಂಗಳ ಬಾಕಿಹಣ ನೀಡುವಂತೆ ಒತ್ತಾಯಿಸಿ ಕಚೇರಿ ಮುಂಭಾಗ ಮಾಲೀಕರು ಸೋಮವಾರ ಪ್ರತಿಭಟನೆ ನಡೆಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ವೃಷಭೇಂದ್ರಪ್ಪ ನೇತೃತ್ವದಲ್ಲಿ ನ್ಯಾಯ ಬೆಲೆ ಅಂಗಡಿ ಮಾಲೀಕರು ಸೇರಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಮಿತಿ ನಿಯಮಿತದ ಕಚೇರಿಗೆ 9 ತಿಂಗಳ ಬಾಕಿ ಹಣವನ್ನು ಕೇಳುವ ಸಲುವಾಗಿ ಆಗಮಿಸಿದ್ದಾಗ ನಿಯಮಿತದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗೈರು ಹಾಜರಾಗಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು.
ಲಾಭದ ಹಣ ನೀಡದ ಅಧ್ಯಕ್ಷ: ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ವೃಷಭೇಂದ್ರ ಮಾತನಾಡಿ, ಟಿಎಪಿಎಂಎಸ್ ಗೋದಾಮು ವತಿಯಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಆಹಾರ ಸಾಮಗ್ರಿಗಳನ್ನು ಲಾರಿಗೆ ವರ್ಗಾಯಿಸಲು ಮತ್ತು ಇಳಿಸಲು ಸೇರಿದಂತೆ ಮೂರು ಹಂತದಲ್ಲಿ ಬರಬೇಕಾಗಿದ್ದ ಲಾಭದ ಹಣವನ್ನು ಕಚೇರಿಯ ಅಧ್ಯಕ್ಷರಾಗಲಿ, ಕಾರ್ಯದರ್ಶಿಯವರಾಗಲಿ ನೀಡದೆ ಮೀನ ಮೇಷ ಎಸಗುತ್ತಿದ್ದಾರೆಂದು ದೂರಿದರು.
ಮಂಜೂರಾದ ಹಣ ಬಿಡುಗಡೆ ಮಾಡಿಲ್ಲ: ರಾಜ್ಯದ ಆಹಾರ ನಿಗಮದ ಅಧಿಕಾರಿಗಳಿಗೆ ಕಳೆದ ಒಂಭತ್ತು ತಿಂಗಳಿನಿಂದ ಬರಬೇಕಾಗಿರುವ ಬಾಕಿ ಹಣವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ ವೇಳೆ ಅಧಿಕಾರಿಗಳು ಮಂಜೂರು ಮಾಡಿದ್ದಾರೆ. ಮಂಜೂರಾಗಿರುವ ಹಣವನ್ನು ಬಿಡುಗಡೆ ಮಾಡುವಂತೆ ಬಿಲ್ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಮಂಜೂರು ಮಾಡಬೇಕಾದ ಅಧಿಕಾರಿಗಳು ಇದುವರೆವಿಗೂ ಹಣ ನೀಡದೆ ಮಾಲೀಕರನ್ನು ಅಲೆದಾಡಿಸುತ್ತಿದ್ದಾರೆಂದು ದೂರಿದರು.
ಅವ್ಯವಹಾರದ ಬಗ್ಗೆ ಸಮಗ್ರ ತನಿಖೆಯಾಗಲಿ: ಟಿಎಪಿಸಿಎಂಎಸ್ ಗೋದಾಮುನಲ್ಲಿ ಕೋಟ್ಯಂತರ ರೂ. ಹಣ ದುರ್ಬಳಕೆಯಾಗಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಹಲವರನ್ನು ಅಮಾನತಿನಲ್ಲಿಟ್ಟು ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿದೆ. ಕೂಡಲೇ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳೇ ಗೈರು: ಸಂಘದ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾಗಿರುವ ಬಾಕಿ ಹಣವನ್ನು ಕೊಡುವುದಾಗಿ ನಿಯಮಿತದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರಲ್ಲಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಲುವಾಗಿ ಎಲ್ಲಾ ಸದಸ್ಯರು ಬಂದು ಅಧಿಕಾರಿಗಳಿಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ತೆರಳುವಂತೆ ಮಾಡಿದ್ದಾರೆಂದು ಆರೋಪಿಸಿದರು.
ಹೋರಾಟದ ಎಚ್ಚರಿಕೆ: ನ್ಯಾಯಬೆಲೆ ಅಂಗಡಿಯ ಸುಮಾರು 93 ಮಾಲೀಕರಿಗೆ 9 ತಿಂಗಳ ಬಾಕಿ ಹಣ 87 ಲಕ್ಷ ರೂ. ನೀಡಬೇಕಾಗಿದ್ದು, 10 ದಿನಗಳ ಒಳಗಾಗಿ ಬಿಡುಗಡೆ ಮಾಡದಿದ್ದರೆ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕೂಡಲೇ ಹಣ ನೀಡಲಿ: ಕಳೆದ 2018ರಲ್ಲಿ ಗೋದಾಮು ಅಧಿಕಾರಿಗಳ ನಿರ್ಲಕ್ಷ್ಯಯಿಂದ ಕೋಟ್ಯಂತರ ರೂ. ದುಬಳìಕೆಯಾಗಿರುವ ವಿಷಯ ಹೊರ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿ ಗೋದಾಮಿನಲ್ಲಿದ್ದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಬೀಗ ಜಡಿದು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕೆಎಸ್ಎಫ್ಸಿ ಗೋದಾಮಿಗೆ ವರ್ಗಾಯಿಸಿದ ಬಳಿಕ ಪ್ರತಿ ತಿಂಗಳು ಬರಬೇಕಾಗಿರುವ ಲಾಭದ ಹಣ ಬರುತ್ತಿದೆ. ಕಳೆದ ವರ್ಷದ ಬಾಕಿ ಹಣ ಮಾತ್ರ ಬರದೆ ಇದ್ದು, ಕೂಡಲೇ ಮಂಜೂರು ಮಾಡಬೇಕು ಇಲ್ಲವಾದ ಪಕ್ಷದಲ್ಲಿ ಟಿಎಪಿಸಿಎಂಎಸ್ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಕಾರ್ಯದರ್ಶಿ ಮರಿಸ್ವಾಮಿ, ಸಹಕಾರ್ಯದರ್ಶಿ ಶಾಂತರಾಜು, ಮುಖಂಡರಾದ ಆನಂದ್, ಜಗದೀಶ ನಾಯಕ, ಶಿವಣ್ಣ, ಸಿದ್ದರಾಜು, ಇತರರು ಇದ್ದರು.