ವಿದೇಶಗಳಿಗೂ ಗೊರವರ ಕುಣಿತ ಕಲೆ ಪಸರಿಸಿದ ಪುಟ್ಟಮಲ್ಲೇಗೌಡ
Team Udayavani, Jun 24, 2019, 3:00 AM IST
ಚಾಮರಾಜನಗರ: ಜಿಲ್ಲೆಯ ಮತ್ತು ಕರ್ನಾಟಕದ ಜಾನಪದ ಸಾಂಸ್ಕೃತಿಕ ರಾಯಭಾರಿಯಾಗಿ ದೇಶ ಹಾಗೂ ಪ್ರಪಂಚದೆಲ್ಲೆಡೆ ಚಾಮರಾಜನಗರದ ಗೊರವರ ಕುಣಿತ ಕಲೆಯನ್ನು ಪಸರಿಸಿದ ಕೀರ್ತಿ ಪುಟ್ಟಮಲ್ಲೇಗೌಡರಿಗೆ ಸಲ್ಲುತ್ತದೆ ಎಂದು ಸಾಹಿತಿ ಹಾಗೂ ಪ್ರಾಂಶುಪಾಲ ಬಿ.ಮಹೇಶ್ ಹರವೆ ಹೇಳಿದರು.
ತಾಲೂಕಿನ ಆಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಆಯೋಜಿಸಿದ್ದ ನಟ, ನಿರ್ದೇಶಕ, ನಾಟಕಕಾರ ಡಾ. ಗಿರೀಶ್ ಕಾರ್ನಾಡ್ ಮತ್ತು ಗೊರವರ ಕುಣಿತ ಕಲಾವಿದ ಪುಟ್ಟಮಲ್ಲೇಗೌಡರಿಗೆ ರಂಗನಮನ ಕಾರ್ಯಕ್ರಮದಲ್ಲಿ ಡಾ.ಗಿರೀಶ್ ಕಾರ್ನಾಡ್, ಪುಟ್ಟಮಲ್ಲೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ನೆನಪಾಗಿರುವ ಪುಟ್ಟಮಲ್ಲೇಗೌಡರು: ಜಿಲ್ಲೆಯ ರಾಮಸಮುದ್ರದಲ್ಲಿ ಜನಿಸಿ ಗೊರವನ ವೇಷ ತೊಟ್ಟು ಮನೆಮನೆಗೆ ತೆರಳಿ ಭಿಕ್ಷೆ ಬೇಡುತ್ತ ತಮ್ಮ ಜೀವನೋಪಾಯವನ್ನು ಪುಟ್ಟಮಲ್ಲೇಗೌಡರು ಆರಂಭಿಸಿದರು. ಮಲೆ ಮಹದೇಶ್ವರ ಬೆಟ್ಟದಿಂದ ತಮ್ಮ ಜನಪದ ಪಯಣ ಪ್ರಾರಂಭಿಸಿ ದೆಹಲಿ, ಮಲೇಶಿಯಾ, ಶ್ರೀಲಂಕಾ, ಅಂಡಮಾನ್ ಮತ್ತಿತರ ಕಡೆ ಸಂಚರಿಸಿ ಗೊರವರ ಕುಣಿತವನ್ನು ಪರಸರಿಸಿದರು.
ಪುಟ್ಟಮಲ್ಲೇಗೌಡರಿಂದ ಜಿಲ್ಲೆಗೆ ಗೌರವ ದೊರೆತಿದೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಆಕಾಡೆಮಿ ಪ್ರಶಸ್ತಿ, ಯಕ್ಷಗಾನ ಆಕಾಡೆಮಿ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಪ್ರಶಸ್ತಿಗಳು ದೊರೆತಿದ್ದು, ಇವರು ಗೊರವರ ಕುಣಿತ ಕಲಾಸೇವೆಯಿಂದ ಇನ್ನು ನಮ್ಮೊಂದಿಗೆ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ ಎಂದು ತಿಳಿಸಿದರು.
ಸೃಜನಶೀಲ ಪ್ರತಿಭೆ: ಗಿರೀಶ್ ಕಾರ್ನಾಡ್ ಅವರು ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಕ್ರಿಯಾಶೀಲ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ತಮ್ಮ ಸೃಜನಶೀಲ ಪ್ರತಿಭೆಯಿಂದ ದೇಶ ಹಾಗೂ ವಿಶ್ವದೆಲ್ಲೆಡೆ ಚಿರಪರಿಚಿತರಾಗಿದ್ದಾರೆ. ಅವರ ನಾಟಕ ಸಾಹಿತ್ಯವು ಜನಪದ, ಪುರಾಣ, ಐತಿಹಾಸಿಕ ವಸ್ತುಗಳನ್ನೊಳಗೊಂಡು ಸಮಕಾಲೀನ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದಾಗಿದೆ ಎಂದು ತಿಳಿಸಿದರು.
ಪುಸ್ತಕಗಳನ್ನು ಸ್ನೇಹಿತರಾಗಿಸಿಕೊಳ್ಳಿ: ಸಾಹಿತಿ ಹಾಗೂ ಪ್ರಾಂಶುಪಾಲ ಮಂಜು ಕೋಡಿಉಗನೆ ಮಾತನಾಡಿ, ಬೆಳಕು ಇಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸೇ ಇಲ್ಲದ ಬದುಕನ್ನು ನಾನು ಸಾಗಿಸುವುದು ಹೇಗೆ ಎಂಬ ಡಾ.ಗಿರೀಶ್ ಕಾರ್ನಾಡ್ ಅವರ ನಾಟಕದ ಸಾಲಿನಂತೆ ಕಾರ್ನಾಡರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಾಗೂ ಸಾಹಿತ್ಯವನ್ನು ಲೋಕಕ್ಕೆ ಸರ್ಮಪಿಸಿದ್ದಾರೆ.
ವಿದ್ಯಾರ್ಥಿಗಳು ಪುಸ್ತಕವನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ನಮ್ಮೂರಿನ ಕಲಾವಿದ ಪುಟ್ಟಮಲ್ಲೇಗೌಡರು ಮತ್ತು ನಾಟಕಕಾರ ಕಾರ್ನಾಡ್ರಂತಹ ಚೇತನಗಳನ್ನು ಪ್ರೇರಣೆಯಾಗಿಟ್ಟುಕೊಂಡು ತಮ್ಮ ಗುರಿಗಳನ್ನು ಸಾಧಿಸಬೇಕು ಎಂದು ತಿಳಿಸಿದರು.
ರಂಗ ಗೀತೆಗಳ ಗಾಯನ: ಆತ್ಮೀಯ ರಂಗ ಪ್ರಯೋಗಾಲಯ ಕಲಾವಿದರು ಕಾರ್ನಾಡರ ತುಘಲಕ್ ನಾಟಕದ ದೃಶ್ಯವೊಂದರ ವಾಚನಾಭಿನಯ ಹಾಗೂ ಹಯವದನ ನಾಟಕದ ರಂಗಗೀತೆಗಳ ಗಾಯನವನ್ನು ನಡೆಸಿಕೊಟ್ಟರು.
ಟ್ರಸ್ಟ್ ಅಧ್ಯಕ್ಷ ಎಸ್.ಕೆ.ಕಿರಣ್ಕುಮಾರ್ ಗಿರ್ಗಿ, ಕಾರ್ಯದರ್ಶಿ ಶಿವುಕುಮಾರ್ ಜನ್ನೂರು ಹೊಸೂರು, ಶಿವಶಂಕರ್ ಚಟ್ಟು, ಜೇಮ್ಸ್ ದೇಶ್ವಳ್ಳಿ, ನವೀನ್ ಉಡಿಗಾಲ, ಮೂರ್ತಿಕೆಂಗಾಕಿ, ಆಲೂರು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬಳಗ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.