ಮಳೆ: ಉಪ್ಪಾರ ಬಡಾವಣೆ ಜಲಾವೃತ
Team Udayavani, Jun 3, 2020, 5:19 AM IST
ಯಳಂದೂರು: ತಾಲೂಕಿನ ವಿವಿಧೆಡೆ ಸೋಮವಾರ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪಟ್ಟಣವೂ ಸೇರಿದಂತೆ ತಾಲೂಕಿನ ಬಿಳಿಗಿರಿರಂಗನಬೆಟ್ಟ, ಯರಗಂಬಳ್ಳಿ, ಗುಂಬಳ್ಳಿ, ಕಂದಹಳ್ಳಿ ಗ್ರಾಮಗಳಲ್ಲೂ ಬಿರುಸಿನ ಮಳೆ ಸುರಿಯಿತು.
ಜಲಾವೃತ: ಯರಗಂಬಳ್ಳಿಯ ಉಪ್ಪಾರ ಬಡಾವಣೆಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರುದ್ರಶೆಟ್ಟಿಯವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ಚರಂಡಿಗಳೆಲ್ಲವೂ ಮಳೆ ನೀರಿನಿಂದ ತುಂಬಿ ಹರಿದಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಮಳೆಯೊಂದಿಗೆ ಮನೆಯೊಳಗೆ ಹಾವು, ಕಪ್ಪೆ, ಕ್ರಿಮಿಕೀಟಗಳು ಮನೆಯೊಳಗೆ ನುಗ್ಗಿದ್ದರಿಂದ ನಿವಾಸಿಗಳು ಆತಂಕಗೊಂಡರು. ಮನೆ ಗಳಿಂದ ಮಳೆ ನೀರನ್ನು ಮೊಗೆದು ಹೊರ ಹಾಕಿದರು.
ಅಪೂರ್ಣ ಚರಂಡಿ ಕಾಮಗಾರಿ: ಇಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲಾಗದೇ ಮನೆಯೊಳಗೆ ನುಗ್ಗಿತು. ಅಲ್ಲದೆ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಈ ಸಮಸ್ಯೆ ಮತ್ತಷ್ಟು ಉಲಣವಾಗಿದೆ. ಮಳೆಗಾಲ ಆರಂಭವಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಗಮನ ನೀಡಬೇಕು. ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
ಜೊತೆಗೆ ಚರಂಡಿಗಳಲ್ಲಿ ಹೂಳು ತೆಗೆಯಬೇಕು ಎಂದು ಇಲ್ಲಿನ ವಾಸಿಗಳಾದ ಆನಂದ್, ಬಸಮಣ್ಣಿ, ಪುಟ್ಟಸ್ವಾಮಿಶೆಟ್ಟಿ ಆಗ್ರಹಿಸಿದ್ದಾರೆ.