ಯುವತಿಯ ಅಪ್ಪಿ ಅಪಾಯಕಾರಿಯಾಗಿ ಬೈಕ್ ಚಾಲನೆ: ಸವಾರ ವಶಕ್ಕೆ
ಅಸಭ್ಯವಾಗಿ ಕೂರಿಸಿಕೊಂಡು ಯದ್ವಾತದ್ವಾ ಬೈಕ್ ರೈಡ್; ವಿಡಿಯೋ ವೈರಲ್
Team Udayavani, Apr 22, 2022, 7:18 PM IST
ಚಾಮರಾಜನಗರ: ನಗರದ ಹೊರ ವಲಯದಲ್ಲಿ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಯುವತಿಯನ್ನು ಕೂರಿಸಿಕೊಂಡು ಅಜಾಗರೂಕತೆಯಿಂದ ಹೆಲ್ಮೆಟ್ ಸಹ ಧರಿಸಿದೆ ಬೈಕ್ ಸವಾರಿ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ. ಸ್ವಾಮಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಾಗಿದ್ದಾನೆ. ಈತ ಏ. 21ರಂದು ಸಂಜೆ 4ಗಂಟೆ ಸಮಯದಲ್ಲಿ ನಗರ ಹಾಗೂ ಗುಂಡ್ಲುಪೇಟೆ ರಸ್ತೆಯ ಯಡಪುರ ಗ್ರಾಮದ ಬಳಿ, ತನ್ನ ಪಲ್ಸರ್ ಬೈಕಿನ ಟ್ಯಾಂಕಿನ ಮೇಲೆ ಯುವತಿಯೋರ್ವಳನ್ನು ಅಸಭ್ಯವಾಗಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ. ಹೆಲ್ಮೆಟ್ ಸಹ ಧರಿಸದೇ ಬೈಕನ್ನು ಯದ್ವಾತದ್ವಾ ಓಡಿಸುತ್ತಿದ್ದ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡ ಚಾಮರಾಜನಗರ ಸಂಚಾರ ಠಾಣೆ ಪೊಲೀಸರು, ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದರು. ಬೈಕ್ ನಂಬರ್ ಪರಿಶೀಲಿಸಿ ಅದರ ಸವಾರ ಎಚ್.ಡಿ. ಕೋಟೆಯ ತಾಲೂಕಿನ ನಿವಾಸಿ ಎಸ್. ಸಿ. ಸ್ವಾಮಿ ಎಂದು ತಿಳಿದು, ಆತನನ್ನು ಪತ್ತೆ ಹಚ್ಚಿ ಶುಕ್ರವಾರ ವಶಕ್ಕೆ ಪಡೆದಿದ್ದಾರೆ.