ಮಾದಪ್ಪನ ಹುಂಡಿಯಲ್ಲಿ 87 ಲಕ್ಷ ರೂ. ಸಂಗ್ರಹ
Team Udayavani, Feb 27, 2019, 6:56 AM IST
ಹನೂರು: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರನ ಸನ್ನಿಧಿಯ ಹುಂಡಿಯಲ್ಲಿ 87 ಲಕ್ಷ ರೂ. ನಗದು, 21 ಗ್ರಾಂ ಚಿನ್ನ ಹಾಗೂ 980 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬೆಳಗ್ಗೆ 7ಗಂಟೆಗೆ ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತ್ನಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು. ಎಣಿಕೆ ಕಾರ್ಯ ಸಂಜೆ 5 ಗಂಟೆಯವರೆಗೂ ಜರುಗಿತು.
ಕಳೆದ 26 ದಿನಗಳ ಅವಧಿಯಲ್ಲಿ ಮಲೆ ಮಹದೇಶ್ವರನ ಹುಂಡಿಯಲ್ಲಿ 87,13,062 (ಎಂಬತ್ತೇಳು ಲಕ್ಷದ ಹದಿಮೂರು ಸಾವಿರದ ಅರವತ್ತೆರೆಡು) ರೂ. ನಗದು, 21 ಗ್ರಾಂ ಚಿನ್ನ ಹಾಗೂ 980 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಎಣಿಕೆ ವೇಳೆ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಬಸವರಾಜು,
ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ, ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ನೌಕರ ಮೋಹನ್ಕುಮಾರ್, ಎಸ್ಬಿಐ ವ್ಯವಸ್ಥಾಪಕ ಸೆಂದಿಲ್ ನಾಥನ್, ಮ.ಬೆಟ್ಟ ಸಿಪಿಐ ಮಹೇಶ್, ಪ್ರಾಧಿಕಾರದ ನೌಕರರು ಹಾಗೂ ದೇಗುಲದ ಸಿಬ್ಬಂದಿ ಉಪಸ್ಥಿತರಿದ್ದರು. ಮ.ಬೆಟ್ಟ ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.