ಹಿಮವದ್ ಗೋಪಾಲಸ್ವಾಮಿಗೆ ವಿಶೇಷ ಪೂಜೆ
Team Udayavani, Aug 26, 2019, 2:16 PM IST
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕಡೆಯ ಶ್ರಾವಣ ಶನಿವಾರದ ಅಂಗವಾಗಿ ಶನಿದೇವರ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಗುಂಡ್ಲುಪೇಟೆ: ಶ್ರಾವಣ ಮಾಸದ ಕಡೆಯ ಶನಿ ವಾರದ ಅಂಗವಾಗಿ ತಾಲೂಕಿನ ವಿವಿಧ ದೇವ ಸ್ಥಾನಗಳಿಗೆ ಭಕ್ತ ಸಾಗರವೇ ಹರಿದು ಬಂದಿತ್ತು.
ಕಡೆ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಆರಾ ಧನಾ ಮಹೋತ್ಸವ ನಡೆಯಿತು.
ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ತೆರಕಣಾಂಬಿ ಸಮೀಪದಲ್ಲಿರುವ ಚಿಕ್ಕ ತಿರುಪತಿ ಎಂದೇ ಖ್ಯಾತಿಯಾಗಿರುವ ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ವೇಣುಗೋಪಾಲನ ದರ್ಶನಕ್ಕೆ ಭೇಟಿ ನೀಡಿದ್ದರು. ಭಕ್ತರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯು ಪಟ್ಟಣದ ನಿಲ್ದಾಣದಿಂದಲೇ 25 ಬಸ್ಗಳನ್ನು ನಿಯೋಜಿ ಸಿತ್ತು. ಅಲ್ಲದೆ ಬೆಟ್ಟದ ತಪ್ಪಲಿನಿಂದಲೂ 4 ಮಿನಿ ಬಸ್ಗಳು ಎಂದಿನಂತೆ ಸಂಚಾರಿಸಿದವು.
ಸಾರಿಗೆ ಬಸ್ಗಳು ಪಟ್ಟಣದಿಂದ 70 ಟ್ರಿಪ್, ಮಿನಿ ಬಸ್ಗಳು ತಪ್ಪಲಿನಿಂದ ಬೆಟ್ಟದವರೆಗೆ ಸರಿ ಸುಮಾರು 100 ಟ್ರಿಪ್ ಸಂಚರಿಸಿದವು ಎಂದು ಸಾರಿಗೆ ಘಟಕದ ವ್ಯವಸ್ಥಾಪಕ ಎಂ.ಜಿ.ಜಯಕುಮಾರ್ ಉದಯವಾಣಿಗೆ ಮಾಹಿತಿ ನೀಡಿದರು.
ಪ್ರವಾಸಿಗರು ಹಾಗೂ ಭಕ್ತರಿಂದ ನೂಕು ನುಗ್ಗಲಾಗದಂತೆ ಸಾರಿಗೆ ಇಲಾಖೆಯು ತಪ್ಪಲಿನಲ್ಲಿಯೇ ಟಿಕೆಟ್ ಕೌಂಟರ್ ತೆರೆಯಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಬಂದೋಬಸ್ತ್ ಆಯೋಜಿಸಿದ್ದರು.
ಹುಲುಗಿನ ಮುರಡಿಯಲ್ಲಿ ಜನ ಜಾತ್ರೆ: ಅಲ್ಲದೆ ತಾಲೂಕಿನ ಹುಲುಗಿನ ಮುರಡಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಈ ವಿಶೇಷ ಪೂಜೆಗೆ ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಹುಲುಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟಕ್ಕೆ 5 ಬಸ್ಗಳನ್ನು ನಿಯೋ ಜಿಸಿತ್ತು. ಪಟ್ಟಣದ ಹೊರವಲಯದಲ್ಲಿರುವ ಕೆಬ್ಬೇಕಟ್ಟೆ ಶನೈಶ್ಚರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶನಿದೇವರು, ಮಹದೇಶ್ವರ, ಸಿದ್ದಪ್ಪಾಜಿ ಹಾಗೂ ಹೊಣಕಾರ ಸಿದ್ದೇಶ್ವರರ ಕಂಡಾಯ ಹಾಗೂ ಉತ್ಸವಮೂರ್ತಿಗಳನ್ನು ಸತ್ತಿಗೆ ಸುರಾಪಾನಿ, ನಂದಿಧ್ವಜ ಮಂಗಳವಾದ್ಯಗಳ ಸಮೇತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ತೆರಕಣಾಂಬಿಯಲ್ಲಿ ಉತ್ಸವ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಆರ್ಯನಯನ ಕ್ಷತ್ರಿಯ ಮಂಡಲಿಯ ವತಿಯಿಂದ 43ನೇ ವರ್ಷದ ಮಹೋತ್ಸವದ ಅಂಗವಾಗಿ ಶ್ರೀ ಶನಿದೇವರ ಹೂವಿನ ಪಲ್ಲಕ್ಕಿ ಉತ್ಸವ ಸಾಂಗವಾಗಿ ನೆರವೇರಿತು. ಶನಿದೇವರ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿ ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.