ಶ್ರೀಗಳ ಫ್ಲೆಕ್ಸ್ ತೆರವು ಖಂಡಿಸಿ ಪ್ರತಿಭಟನೆ
Team Udayavani, Mar 12, 2019, 7:43 AM IST
ಕೊಳ್ಳೇಗಾಲ: ಚುನಾವಣಾ ಆಯೋಗ ಲೋಕಸಭಾ ಚುನಾವಣೆಯನ್ನು ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೊಳಿಸಿದ ಬಳಿಕ ನಗರದ ಮುಖ್ಯರಸ್ತೆಗಳಲ್ಲಿ ಹಾಕಲಾಗಿದ್ದ ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಗಳ ಫ್ಲೆಕ್ಸ್ಗಳನ್ನು ನಗರಸಭೆಯವರು ತೆರವುಗೊಳಿಸಿದ್ದನ್ನು ಖಂಡಿಸಿ ವೀರಶೈವ ಮಹಾಸಭಾ ಹಾಗೂ ಲಿಂಗಾಯತ ಯುವಕರು ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.
ವೀರಶೈವ ಲಿಂಗಾಯತ ಮಹಾಸಭಾ ಮತ್ತು ಸಿದ್ಧಗಂಗಾ ಶ್ರೀಗಳ ಭಕ್ತವೃಂದದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಡಾ. ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಸಲಾಗಿತ್ತು.
ಭಾನುವಾರ ಸಂಜೆ ಮೆರವಣಿಗೆಯು ಎಂಜಿಎಸ್ವಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟು ಮುಖ್ಯರಸ್ತೆಗೆ ಬರುತ್ತಿದ್ದಂತೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಜಿಲ್ಲಾಧಿಕಾರಿಗಳು ಸೂಚನೆ ಮೇರೆಗೆ ನಗರಸಭೆ ನೌಕರರು ಸ್ವಾಮೀಜಿಗಳ ಫ್ಲೆಕ್ಸ್ಗಳನ್ನು ತೆರವುಗೊಳಿಸಿದ್ದರು.
ಮೆರವಣಿಗೆಯಲ್ಲಿ ಆಗಮಿಸುತ್ತಿದ್ದ ಯುವಕರು ಶ್ರೀಗಳ ಫ್ಲೆಕ್ಸ್ಗಳನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು. ಮತ್ತೂಂದು ಗುಂಪು ಪ್ರತಿಭಟನೆ ಮಾಡದೆ ನ್ಯಾಯ ಕೇಳಬೇಕೆಂದು ವಾದಿಸಿದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಘರ್ಷಣೆಗೆ ತಿರುಗುತ್ತಿದ್ದಂತೆ, ಸ್ಥಳಕ್ಕೆ ಧಾವಿಸಿದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಕಾಂತ್ ಮತ್ತು ಸಿಬ್ಬಂದಿವರ್ಗ ಪರಿಸ್ಥಿತಿಯನ್ನು ತಿಳಿಗೊಳಿಸಿದರು.