ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
Team Udayavani, Feb 6, 2018, 3:38 PM IST
ಗುಂಡ್ಲುಪೇಟೆ: ತಾಲೂಕಿನ ದಡದಹಳ್ಳಿ ಗ್ರಾಮ ಬಳಿಯ ಜಮೀನಿನಲ್ಲಿ ಸುಟ್ಟುಕರಕಲಾಗಿರುವ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಬ್ಬಹಳ್ಳಿ ಮತ್ತು ದಡದಹಳ್ಳಿ ಮಾರ್ಗ ಮಧ್ಯೆ ಇರುವ ಜಮೀನಿನಲ್ಲಿ ಸುಮಾರು 22 ವಯಸ್ಸಿನ ಅಪರಿಚಿತ ಯುವಕನ ಶವವು ಸಂಪೂರ್ಣ ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಸ್ಥಳದಲ್ಲಿ ಸತ್ತ ವ್ಯಕ್ತಿಯ ಪಾದರಕ್ಷೆ, ತಲೆಗೆ ಮಾರಕಾಸ್ತ್ರದಿಂದ ಹೊಡೆದು ಎಳೆದುಕೊಂಡು ಹೋಗಿರುವಲ್ಲಿ ಬಿದ್ದಿರುವ ರಕ್ತದ ಕಲೆ, ಕುಡಿದು ಬಿಸಾಡಿರುವ ಮದ್ಯದ ಪೌಚ್ ಹಾಗೂ ಸಾಕ್ಷ್ಯ ನಾಶ ಮಾಡಲು ಬಟ್ಟೆಯನ್ನು ಸುಡಲು ಪ್ರಯತ್ನ ಪಟ್ಟಿರುವ ಕುರುಹುಗಳು ಸ್ಥಳದಲ್ಲಿ ಸಿಕ್ಕಿದ್ದು, ವ್ಯಕ್ತಿಯ ಗುರುತು ಸಿಗದಿರಲಿ ಎಂದು ಮೃತದೇಹವನ್ನು ಸೀಮೆಎಣ್ಣೆ ಸುರಿದು ಸುಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಎಸ್ಪಿ ಗೀತಾಪ್ರಸನ್ನ, ಡಿವೈಎಸ್ಪಿ ಜಯ ಕುಮಾರ್, ತೆರಕಣಾಂಬಿ ಠಾಣೆಯ ಪಿಎಸ್ಐ ರವಿಕಿರಣ್ ಭೇಟಿ ನೀಡಿ ಪರಿಶೀಲಿಸಿದರು.